ಕಾಸರಗೋಡು: ಹಣ ಕಟ್ಟಲೆಂದು ಮನೆಯಿಂದ ತೆರಳಿದ ಕೂಲಿ ಕಾರ್ಮಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡುವಿನ ಮಂಜೇಶ್ವರದಲ್ಲಿ ಅ.17 ರಂದು ನಡೆದಿದೆ.
ಮಂಜೇಶ್ವರ ಸಮೀಪದ ಮಿಂಜದ ಕುಳೂರು ಧೂಮಾವತಿ ದೈವಸ್ಥಾನ ಬಳಿಯ ನಿವಾಸಿ ಕೂಲಿ ಕಾರ್ಮಿಕ ಹರೀಶ್ (38) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯಾಗಿದ್ದಾರೆ.

ಹರೀಶ್ ಅವರು ಹಣಕಾಸು ಸಂಸ್ಥೆಯಲ್ಲಿ ಹಣ ಕಟ್ಟಲೆಂದು ಬೆಳಗ್ಗೆ 7.45 ಕ್ಕೆ ಮನೆಯಿಂದ ತೆರಳಿದ್ದು ಅವರ ಮೃತದೇಹ ಮನೆಯಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಅಕೇಶಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪರಿಸರದ ನಿವಾಸಿಯೊಬ್ಬರಿಗೆ ಕಂಡು ಬಂದಿದೆ.

ಕೂಡಲೇ ಮನೆಯವರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಲಾಯಿತು. ಬಳಿಕ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲಾಗಿದೆ.
ಮೃತರು ತಾಯಿ ಲಕ್ಷ್ಮಿ, ಪತ್ನಿ ಬೇಬಿ, ಮಕ್ಕಳಾದ ಯಜ್ಞ ಶ್ರೀ, ಲಿಖಿತ್ ಸಹೋದರರಾದ ಹರಿನಾಥ, ಗಿರೀಶ ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



