ಬೆಳ್ತಂಗಡಿ: ಸುರಿದ ಭಾರಿ ಮಳೆಗೆ ಮೋರಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮುಂಡಾಜೆಯಲ್ಲಿರುವ ಗುಂಡ ಶ್ರೀ ಮೂರ್ತಿಲ್ಲಾಯ ದೈವಸ್ಥಾನದ ಬಳಿ ಅ.14 ರಂದು ಸಂಜೆಯ ವೇಳೆ ನಡೆದಿದೆ.

ಈ ಹಿಂದೆ ಭಾಗಶಃ ಕುಸಿತ ಕಂಡಿದ್ದ ಮೋರಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ.
ಹಿಂದಿನ ಮಳೆಗಾಲದಲ್ಲಿ ಈ ಮೋರಿ ಕುಸಿತಗೊಂಡಾಗ ಇದರ ದುರಸ್ತಿಗೆ ಮುಂಡಾಜೆ ಗ್ರಾಮ ಪಂಚಾಯಿತಿ ಮುಂದಾಗಿತ್ತು.ಆದರೆ ಈ ಜಾಗ ಖಾಸಗಿ ವ್ಯಕ್ತಿಯೊಬ್ಬರದ್ದಾಗಿರುವ ಕಾರಣ ಆಕ್ಷೇಪ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ.

ಆದರೆ ಇದೀಗ ಮೋರಿ ಸಂಪೂರ್ಣ ಕುಸಿದು ಬಿದ್ದಿದ್ದು ಸದ್ಯ ತಾತ್ಕಾಲಿಕ ಸಂಪರ್ಕವೂ ಇಲ್ಲದಂತಾಗಿದೆ. ಇಲ್ಲಿ ಮೋರಿ ನಿರ್ಮಾಣಕ್ಕೆ ಖಾಸಗಿಯವರ ಆಕ್ಷೇಪ ಇರುವ ಕಾರಣ ಸಂಪರ್ಕಕ್ಕೆ ಮುಂದಿನ ಯೋಜನೆ ಏನು ಎಂಬುದು ಕಾದು ನೋಡಬೇಕಾಗಿದೆ.

ಸ್ಥಳಕ್ಕೆ ಪಂಚಾಯಿತಿ ಆಡಳಿತ ಮಂಡಳಿ ತೆರಳಿ ಪರಿಶೀಲನೆ ನಡೆಸಿದ್ದು ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಕೊಡುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.



