ಬಂಟ್ವಾಳ: ಮನೆಗೆ ಬೆಂಕಿ ತಗುಲಿ ಸಾವಿರಾರು ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ನಾವೂರ ಎಂಬಲ್ಲಿ ನಡೆದಿದೆ.
ನಾವೂರ ಗ್ರಾಮದ ಕನಪಾದೆ ನಿವಾಸಿ ದಿನೇಶ್ ಪೂಜಾರಿ ಅವರ ಮನೆಯಲ್ಲಿ ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಮಗು ಜೋರಾಗಿ ಆಳುತ್ತಿದ್ದಾಗ ಮನೆಮಂದಿಗೆ ಎಚ್ಚರವಾಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಬೆಂಕಿಯ ಕೆನ್ನಾಲಗೆ ಮನೆಯಲ್ಲಿ ದಾಸ್ತಾನು ಇರಿಸಿದ್ದ ಅಕ್ಕಿ ಗೋಣಿ ಚೀಲಗಳು ಮಕ್ಕಳ ಶಾಲಾ ಸಮವಸ್ತ್ರಗಳು, ಶಾಲಾ ಪಠ್ಯ ಪುಸ್ತಕಗಳು ಮತ್ತು ಮನೆಯವರ ಇತರ ಬಟ್ಟೆ ಬರೆಗಳು ಸುಟ್ಟು ಭಸ್ಮವಾಗಿದೆ.

ಘಟನೆಯಿಂದ ಸಾವಿರಾರು ರೂ . ಮೌಲ್ಯದ ಸೊತ್ತುಗಳು ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಹಾರದ ಭರವಸೆ ನೀಡಿದ್ದಾರೆ.




