ಮಧ್ಯಪ್ರದೇಶ: ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಸರ್ಕಾರಿ ಶಿಕ್ಷಕ ದಂಪತಿ ನವಜಾತ ಶಿಶುವನ್ನು ಕಾಡಿನಲ್ಲಿ ಬಿಟ್ಟ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ನಂದನವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸರ್ಕಾರಿ ಶಿಕ್ಷಕರಾದ ಬಬ್ಲು ದಾಂಡೋಲಿಯಾ ಮತ್ತು ರಾಜಕುಮಾರಿ ದಾಂಡೋಲಿಯಾ ತಮ್ಮ ಮಗುವನ್ನು ಕಾಡಿನಲ್ಲಿ ಬಿಟ್ಟ ದಂಪತಿಯಾಗಿದ್ದಾರೆ.

ಕಾಡಿನ ಸಮೀಪ ಮಗವೊಂದು ಅಳುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೀಟಗಳಿಂದ ಕಚ್ಚಲ್ಪಟ್ಟ ಮತ್ತು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸುವ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಪೋಲಿಸರು ತನಿಖೆ ನಡೆಸಿದ ವೇಳೆ ಅತ್ಯಂತ ಕ್ರೂರ ಘಟನೆಯೊಂದು ಬೆಳಕಿಗೆ ಬಂದಿದ್ದು ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಶಿಕ್ಷಕ ದಂಪತಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದಲ್ಲಿ 2001 ರ ಜನವರಿ 26 ರಿಂದ ಎರಡು ಮಕ್ಕಳ ನೀತಿ ಇದೆ. ಇದರ ಪ್ರಕಾರ, ಸರ್ಕಾರಿ ಉದ್ಯೋಗಿಗಳಿಗೆ ಮೂರು ಅಥವಾ ಹೆಚ್ಚು ಮಕ್ಕಳಿದ್ದರೆ ಅವರು ಸೇವೆಗೆ ಅರ್ಹರಾಗುವುದಿಲ್ಲ ಎಂದಿದೆ.
ಈ ಕಾರಣದಿಂದಾಗಿ ದಂಪತಿ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭಯದಿಂದ ತಮ್ಮ ನಾಲ್ಕನೇ ಶಿಶುವನ್ನು ಜನ್ಮದಿನದ ಕೆಲವೇ ಗಂಟೆಗಳಲ್ಲಿಯೇ ಕಾಡಿಗೆ ಕರೆದು ಕಲ್ಲಿನ ಕೆಳಗೆ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



