ಅಮರಾವತಿ: ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದ ಶಾಲೆಯೊಂದರಲ್ಲಿ ನಡೆದಿದೆ.
ಅಕ್ಷಿತಾ ಮೃತಪಟ್ಟ ಮಗು. ಮಗುವಿನ ತಾಯಿ ಕೃಷ್ಣವೇಣಿ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿದ್ಧ ಬಿಸಿ ಹಾಲನ್ನು ತಣ್ಣಗಾಗಿಸಲು ಸೀಲಿಂಗ್ ಫ್ಯಾನ್ ಅಡಿಯಲ್ಲಿ ಇಡಲಾಗಿತ್ತು.

ತಾಯಿ ಅಡುಗೆಮನೆಯಲ್ಲಿ ಇಲ್ಲದ ವೇಳೆ ಬೆಕ್ಕನ್ನು ಹಿಂಬಾಲಿಸಿಕೊಂಡು ಹೋದ ಮಗು ಕುದಿಯುತ್ತಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದಿದೆ ಎನ್ನಲಾಗಿದೆ.
ಮಗುವಿನ ಚೀರಾಟ ಕೇಳಿದ ತಾಯಿ ಕೃಷ್ಣವೇಣಿ, ಕೂಡಲೇ ಮಗುವನ್ನು ಪಾತ್ರೆಯಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರ ಶಿಫಾರಸಿನ ಮೇರೆಗೆ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.




