ಬಂಟ್ವಾಳ: ತಾಲೂಕಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಕಾನೂನು ಉಲ್ಲಂಘನೆ ಮಾಡಿದ ಆರೋಪ ಕೇಳಿ ಬಂದಿದೆ.
ಇಲ್ಲಿನ ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಆ.27ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು

ಈ ವೇಳೆ ರಾತ್ರಿ ಸುಮಾರು 10.45 ಗಂಟೆಗೆ ಧ್ವನಿವರ್ಧಕವನ್ನು ಅಳವಡಿಸಿ ಕಾರ್ಯಕ್ರಮ ನಡೆಸುತ್ತಿದ್ದ ಸಮಿತಿಯವರಿಗೆ, ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಅವರು ಜಾರಿಯಲ್ಲಿರುವ ಕಾನೂನು ಹಾಗೂ ಠಾಣೆಯಿಂದ ನೀಡಲಾಗಿದ್ದ ನೋಟಿಸ್ ಕುರಿತು ತಿಳಿಸಿ ಧ್ವನಿವರ್ಧಕ ನಿಲ್ಲಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಆದರೆ ಬಳಿಕ ರಾತ್ರಿ 11.50ರ ಸುಮಾರಿಗೆ ಪೊಲೀಸರು ಮತ್ತೆ ಸ್ಥಳಕ್ಕೆ ಬಂದಾಗ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.

ವಿಚಾರಣೆ ವೇಳೆ ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ, ಪದಾಧಿಕಾರಿಗಳು, ನಾಟಕ ಆಯೋಜಕರು ಹಾಗೂ ಸುಮಾರು 10-15 ಮಂದಿ ಸೇರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರಿದಿದೆ.




