ಧರ್ಮಸ್ಥಳ : ಸೋಮವಾರ ಧರ್ಮಸ್ಥಳ ಗ್ರಾಮದ ಬಂಗ್ಲ ಗುಡ್ಡ ಪ್ರದೇಶದಲ್ಲಿ ಎಸ್ ಐ ಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದ್ದು, ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು ನಿನ್ನೆಯ ದಿನ ದೂರುದಾರ ಸಾಕ್ಷಿ ಗುರುತಿಸಿರುವ ಸ್ಥಳ ಸಂಖ್ಯೆ 11 ರ ಪ್ರದೇಶದಿಂದ ಸುಮಾರು 100 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ, ಸುಮಾರು 100 ಅಡಿ ಎತ್ತರದ ಗುಡ್ಡದ ಮೇಲೆ, ಉತ್ಖನನದ ಬಳಿಕ ಕನಿಷ್ಟ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದ್ದು, ಅದರಲ್ಲಿನ ಒಂದು ಕಳೇಬರವು ಮಹಿಳೆಯದಾಗಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿಯೇ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ದೂರುದಾರನಾದ ಭೀಮ ಮೊದಲು ಗುರುತಿಸಿದ್ದ ಸ್ಥಳ ಸಂಖ್ಯೆ 11ರ ಬದಲು, ಅದರ ಪಕ್ಕಕ್ಕೆ ಕರೆದೊಯ್ಯಲು ಆತನಿಗೆ ಎಸ್ಐಟಿ ತಂಡವು ಅವಕಾಶ ನೀಡಿದ್ದರಿಂದಲೇ ಸೋಮವಾರದ ಕಾರ್ಯಾಚರಣೆ ಯಶಸ್ವಿಯಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ.

ದೂರುದಾರ ಸಾಕ್ಷಿಯೂ ಮೊದಲ ದಿನ ಗುರುತು ಮಾಡಿದ ಸ್ಥಳದಲ್ಲಿಯೇ ಅಗೆಯಬೇಕು, ಅಲ್ಲಿಂದಲೇ ಕಳೆ ಬರಗಳನ್ನು ಹೊರ ತೆಗೆಯಬೇಕು ಎನ್ನುವುದು ವೈಜ್ಞಾನಿಕ ಮಾತ್ರವಲ್ಲ, ನಿರರ್ಥಕವೂ ಹೌದು. ಮೊದಲ ದಿನ ತೋರಿಸಿದ್ದ ಜಾಗಗಳನ್ನು ಗುರುತಿಸಲು ಸ್ವಾತಂತ್ರ್ಯವಿರುವ ವ್ಯಕ್ತಿಗೆ, ತಾನು ಮೊದಲು ಗುರುತಿಸಿದ್ದು ತಪ್ಪಾಗಿರಬಹುದೆಂದು ತಿದ್ದಿಕೊಳ್ಳಲು ಸಹಜ ಸ್ವಾತಂತ್ರ್ಯವೂ ಇದೆ.

ಈ ನಿಟ್ಟಿನಲ್ಲಿ ಈವರೆಗಿನ ಎಸ್ಐಟಿಯ ಮತ್ತು ಶೋಧಕಾರ್ಯವನ್ನು ಮುನ್ನಡೆಸುತ್ತಿರುವ ತಂಡದ ಕಾರ್ಯಕ್ಷಮತೆಯು ಶ್ಲಾಘನೀಯ ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಅಂತ ಹೇಳಲಾಗುತ್ತಿದೆ.



