ಬೆಳ್ತಂಗಡಿ: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಜೂನ್ 29ರಂದು ರೋಟರಿ ಕ್ಲಬ್ ಯಲಹಂಕ, ಬೆಂಗಳೂರು ವತಿಯಿಂದ 10 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಯಲಹಂಕದ ಅಧ್ಯಕ್ಷರು ಹಾಗೂ ಬೆಳಾಲು ಶಾಲೆಯ ಹಿರಿಯ ವಿದ್ಯಾರ್ಥಿಯಾದ ರೋಟೇರಿಯನ್ ಅಶೋಕ್ ಹೆಬ್ಬಾರ್ ಮಾತನಾಡಿ, ಹಣ ಗಳಿಕೆಯೇ ಮುಖ್ಯವಲ್ಲ ಸಮಾಜಕ್ಕೆ ಸಹಾಯವಾಗುವ ಕನಸುಗಳನ್ನು ಕಟ್ಟಿಕೊಳ್ಳಬೇಕು ಇಂತಹ ಸೌಲಭ್ಯಗಳನ್ನು ಪಡೆದವರು ಸಮಾಜಕ್ಕೆ ಮರಳಿ ನೀಡುವ ಮನಸ್ಸು ಮತ್ತು ಅವಕಾಶಗಳು ಲಭ್ಯವಾಗಲಿ ಎಂದು ಬೈಸಿಕಲ್ ವಿತರಿಸಿ ಶುಭ ಹಾರೈಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಮಾತನಾಡಿ, ತನ್ನತನಕ್ಕಿಂತ ಮಿಗಿಲಾಗಿ ಸೇವೆಯನ್ನು ಮಾಡುವ ಮನಸ್ಸು ಎಲ್ಲರಿಗೂ ಒದಗಲಿ ಎಂದು ತಿಳಿಸಿ, ಬೈಸಿಕಲ್ ನೀಡಿದ ರೋಟರಿ ಕ್ಲಬ್ ಯಲಹಂಕದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಯಲಹಂಕದ ಕಾರ್ಯದರ್ಶಿ ರೋಟೇರಿಯನ್ ಭಾಸ್ಕರ್ ಬಿ.ಎಂ., ಸದಸ್ಯರಾದ ರೋಟೇರಿಯನ್ ಸತೀಶ್ ಶೆಟ್ಟಿ ಹಾಗೂ ರೋಟೇರಿಯನ್ ಜಯರಾಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಗೌಡ ಕುರ್ಕಿಲ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕ ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








