ಬೆಳ್ತಂಗಡಿ: ತಾಲೂಕಿನ ಧಮ೯ಸ್ಧಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಯ 3ನೇ ದಿನವಾದ ಇಂದು ಆರನೇ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಯುವ ಸಂದರ್ಭದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಹಿಂದಿನ ದಿನಗಳಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದ ಭಾಗವಾಗಿ, ಮೃತದೇಹಗಳ ಪತ್ತೆಗಾಗಿ ನಡೆಸಲಾಗುತ್ತಿರುವ ಶೋಧ ಕಾರ್ಯಾಚರಣೆಯ 3ನೇ ದಿನವಾದ ಇಂದು ಕೆಲ ಅವಶೇಷಗಳು ಪತ್ತೆಯಾಗಿದೆ. ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ದೂರುದಾರನು ಗುರುತಿಸಿದ್ದ ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪದಲ್ಲಿರುವ ಆರನೇ ಸ್ಥಳದಲ್ಲಿ ಅಗೆದ ವೇಳೆ, ಎಲುಬಿನ ಚೂರುಗಳು ಲಭಿಸಿದ್ದಾಗಿ ತಿಳಿದುಬಂದಿದೆ.
ಈ ಹಿಂದೆ ನಡೆದ ಎರಡು ದಿನಗಳ ಶೋಧ ಕಾರ್ಯಾಚರಣೆಯಲ್ಲಿ, ದೂರುದಾರನು ಗುರುತಿಸಿದ್ದ ಐದು ಸ್ಥಳಗಳಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿರಲಿಲ್ಲ. ಆದರೆ, ಇಂದು ನಡೆದ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ತನಿಖೆಗೆ ಹೊಸ ತಿರುವು ಕೊಡುವ ಸಾಧ್ಯತೆಯಿದೆ.



