ಯೆಮೆನ್: ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ನ ನಿಮಿಷಾ ಪ್ರಿಯಾ, 2017 ರಲ್ಲಿ ಯೆಮೆನ್ ಪ್ರಜೆಯ ಕೊಲೆ ಮಾಡಿ ಶಿಕ್ಷೆಗೊಳಗಾದರು. 2020 ರಲ್ಲಿ, ಅವರಿಗೆ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023 ರ ನವೆಂಬರ್ನಲ್ಲಿ ತಿರಸ್ಕರಿಸಿತು. ಅವರು ಪ್ರಸ್ತುತ ಇರಾನ್ ಬೆಂಬಲಿತ ಹೌತಿ ಬಂಡುಕೋರರಿಂದ ನಿಯಂತ್ರಿಸಲ್ಪಡುವ ರಾಜಧಾನಿ ಸನಾದಲ್ಲಿ ಬಂಧನದಲ್ಲಿದ್ದಾರೆ.

ನಿಮಿಷಾರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗ ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ನ್ಯಾ.ವಿಕ್ರಮ್ನಾಥ್ ಹಾಗೂ ನ್ಯಾ.ಸಂದೀಪ್ ಮೆಹ್ತಾರಿದ್ದ ಪೀಠ ವಿಚಾರಣೆ ನಡೆಸಿದೆ. ಇದೇ ವೇಳೆ ಶಿಕ್ಷೆ ಮುಂದೂಡಿಕೆಯಾಗಿರುವ ಬಗ್ಗೆ ಅರ್ಜಿದಾರರು ಪೀಠಕ್ಕೆ ತಿಳಿಸಿದ್ದಾರೆ. ಅರ್ಜಿದಾರರ ಪರ ವಕೀಲರು ‘ಮೊದಲು ನಿಮಿಷಾಗೆ ಕ್ಷಮಾದಾನ ಸಿಗಬೇಕು, ಬಳಿಕ ಪರಿಹಾರದ ವಿಚಾರ’ ಎಂದಿದ್ದಾರೆ.

ವಿಚಾರಣೆಯನ್ನು ಪೀಠವು ಆ.14ಕ್ಕೆ ಮುಂದೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ.


