ಹಾಸನ: ಶಾಲೆಯಲಿ ಶಿಕ್ಷಕಿಯೊಬ್ಬರು ಪುಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಬಾಳುಪೇಟೆ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಒಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ದಿವಾಕರ್ಗೌಡಗೆ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ರಜನಿ ಹೊಡೆದಿದ್ದು, ಶಿಕ್ಷಕಿ ಹೊಡೆದ ಏಟಿಗೆ ಬಾಲಕನ ಮೈ ಮೇಲೆ ಬಾಸುಂಡೆ ಬಿದ್ದಿದೆ, ಈ ಘಟನೆಯಿಂದ ಬಾಲಕನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಬಾಲಕ ದಿವಾಕರ್ ಗೌಡನ ತಂದೆ ರಂಗಸ್ವಾಮಿ ಮತ್ತು ತಾಯಿ ಕಾವ್ಯ ಎಂಬುವರು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಮಗ ಚೆನ್ನಾಗಿ ಓದಲಿ ಎಂದು ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಶಿಕ್ಷಕಿಯ ಅಮಾನವೀಯ ವರ್ತನೆ ಕಂಡು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಲಕನ ಪೋಷಕರು ದೂರು ನೀಡಲು ಮುಂದಾಗಿದ್ದಾರೆ.



