ಉಡುಪಿ: ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶು ರಾಮ್ ಥೀಮ್ ಪಾರ್ಕ್ನಲ್ಲಿ ಸ್ಥಾಪಿಸಿರುವ ಪರಶುರಾಮ ಮೂರ್ತಿ ಕಂಚಿನ ಬದಲು ಹಿತ್ತಾಳೆ ಲೋಹದಿಂದ ನಿರ್ಮಿತವಾಗಿರುವುದು ಎಂದು ತಜ್ಞರ ಪರಿಶೀಲನೆ ಹಾಗೂ ತನಿಖೆಯಿಂದ ದೃಢಪಟ್ಟಿದೆ.

ಈ ಮೂರ್ತಿಯನ್ನು ಶಿಲ್ಪಿ ಕೃಷ್ಣ ನಾಯ್ಕ್ ಅವರು ತಮ್ಮ ಕ್ರಿಶ್ ಆರ್ಟ್ ವರ್ಲ್ಡ್ ಸಂಸ್ಥೆಯ ಮೂಲಕ ನಿರ್ಮಿಸಿದ್ದರಾದರೂ, ಸರ್ಕಾರದಿಂದ ಕಂಚಿನ ಮೂರ್ತಿಗೆ ಹಣ ಪಡೆದಿದ್ದರೂ ಅದು ನಕಲಿಯಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಸಂಬಂಧ 2024ರ ಜೂನ್ 21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ಶಿಲ್ಪಿ ಕೃಷ್ಣ ನಾಯ್ಕ್ ಕಂಚಿನ ಬದಲು ಹಿತ್ತಾಳೆಯಿಂದ ಮೂರ್ತಿ ನಿರ್ಮಿಸಿರುವುದು ಖಚಿತವಾಗಿದೆ.

ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್ನ ಷರತ್ತುಗಳನ್ನು ಪಾಲಿಸದೇ, ಮೂರ್ತಿಯ ಭಾಗವನ್ನು ಸ್ಥಳಾಂತರಿಸಿ, ತಪ್ಪು ಮಾಹಿತಿ ನೀಡಿದ್ದು, ಈ ಕುರಿತು ಶಿಲ್ಪಿ ಹಾಗೂ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 409, 201, 120 (ಬಿ), 34 ಅಡಿಯಲ್ಲಿ 1231 ಪುಟಗಳ ದೋಷಾರೋಪಣಾ ಪಟ್ಟಿ ತಯಾರಿಸಿ, ಪೊಲೀಸರು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.



