ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ಜುಲೈ 4 ರಂದು ದೂರು ನೀಡಿದ್ದ ವ್ಯಕ್ತಿ ಶುಕ್ರವಾರದಂದು ಸಂಪೂರ್ಣ ಮುಖ ಮುಚ್ಚಿಕೊಂಡು ಇನ್ನೋವಾ ಕಾರಲ್ಲಿ ಬಂದು ಬೆಳ್ತಂಗಡಿಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ಸಂಜೆ 4.40ಕ್ಕೆ ತನ್ನ ಇಬ್ಬರು ವಕೀಲರ ಜೊತೆ ದೂರುದಾರ ವ್ಯಕ್ತಿ ಹಾಜರಾಗಿ ಬಿಎನ್ಎಸ್ 183 ಪ್ರಕರಣಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.


ಬಳಿಕ ಹೇಳಿಕೆಯ ಪತ್ರಿಗೆ ಸಹಿ ಹಾಕಿ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತನಿಖೆಗಾಗಿ ಕಾರಿನಲ್ಲಿ ತೆರಳಿದರು.
ಬಳಿಕ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಠಾಣೆಗೆ ಆಗಮಿಸಿದ ಮಂಗಳೂರು ಎಫ್ಎಸ್ಎಲ್ ತಂಡದ ಮೂವರು ಸೋಕೋ ಸಿಬ್ಬಂದಿಗಳ ಮುಂದೆ ದೂರುದಾರ ಮತ್ತು ವಕೀಲರು ಬ್ಯಾಗ್ ನಲ್ಲಿ ತಂದಿದ್ದ ಕೆಲವು ಮೃತದೇಹದ ಕಳೇಬರವನ್ನು ನೀಡಿದ್ದು ಅದನ್ನು ಮಹಜರು ನಡೆಸಿ ಪೊಲೀಸರು ವಶಕ್ಕೆ ಪಡೆದುಕೊಂಡರು.

ಮುಂದಿನ ತನಿಖೆಯ ಬಗ್ಗೆ ಪೊಲೀಸರು ಮತ್ತು ವಕೀಲರು ಮಾತುಕತೆ ನಡೆಸಿದ್ದಾರೆ. ನಂತರ ರಾತ್ರಿ ಸುಮಾರು 11 ಗಂಟೆಗೆ ದೂರುದಾರನನ್ನು ವಕೀಲರು ಕಾರಿನಲ್ಲಿ ವಾಪಸ್ ಕೆರದುಕೊಂಡು ತೆರಳಿದ್ದಾರೆ.
ಹಲವು ವರ್ಷಗಳ ಕಾಲ ಧರ್ಮಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದಾಗ ಮೇಲಾಧಿಕಾರಿಗಳು ಸೂಚಿಸಿದ ಹಲವು ಹೆಣಗಳನ್ನು ನಾನು ಗುಂಡಿಗೆ ಹಾಕಿದ್ದೇನೆ. ನನ್ನ ಕುಟುಂಬಕ್ಕೆ ಕಿರುಕುಳ ಪ್ರಾರಂಭವಾದಗ ನಾನು ತಪ್ಪಿಸಿಕೊಂಡು ಹೋಗಿದ್ದೇನೆ.

ಇದೀಗ ನನಗೆ ಆ ಕೃತ್ಯಗಳ ಬಗ್ಗೆ ಪಾಪಪ್ರಜ್ಜೆ ಕಾಡುತ್ತಿದೆ. ನಾನು ಅಲ್ಲಿ ನಡೆದ ಅತ್ಯಾಚಾರ, ಕೊಲೆಗಳ ಹೆಣ್ಣಗಳನ್ನು ಹೂತಿಟ್ಟ ಜಾಗ ತೋರಿಸುತ್ತೆನೆ ಎಂದು ವಕೀಲರ ಮೂಲಕ ಆ ವ್ಯಕ್ತಿ ದೂರು ಕೊಟ್ಟಿದ್ದ.


