ಬಳಂಜ: ಕಳೆದ ಹಲವು ವರ್ಷಗಳಿಂದ ಬಳಂಜ-ಸುದೆಗುಂಡಿ-ತೆಂಕಕಾರಂದೂರು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದ ಬಳಂಜ ಸುದೆಗುಂಡಿ ಸಂಪರ್ಕ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಅವರು ಜುಲೈ 12ರಂದು ಶಿಲಾನ್ಯಾಸ ನೆರವೇರಿಸಿದರು.

ಸುಮಾರು ರೂ.1 ಕೋಟಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣಗೊಳ್ಳಲಿದ್ದು, ಬಳಂಜ, ನಾಲ್ಕೂರು ಹಾಗೂ ತೆಂಕಕಾರಂದೂರು ಗ್ರಾಮದ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಈ ವೇಳೆ ಬಳಂಜ–ನಾಲ್ಕೂರು–ತೆಂಕಕಾರಂದೂರು ಆಟೋ ಚಾಲಕ-ಮಾಲಕರ ಸಂಘದ ಸದಸ್ಯರು, ಸುಸಜ್ಜಿತ ಆಟೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಸತೀಶ್ ರೈ ಬಾರ್ದಡ್ಕ, ಯುವರಾಜ್ ಜೈನ್, ಇಂಜಿನಿಯರ್ ದಶರಥ, ಗಣೇಶ್ ಸಂಭ್ರಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಗ್ನಿವೀರ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಬಳಂಜದ ರಂಜಿತ್ ಸಹೋದರರ ಪೋಷಕರನ್ನು ಗೌರವಿಸಲಾಯಿತು. ಗ್ರಾಮಸ್ಥರು ತಮ್ಮ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಅನುದಾನ ಮಂಜೂರು ಮಾಡಿದ ಶಾಸಕ ಹರೀಶ್ ಪೂಂಜ ಅವರಿಗೆ ಅಭಿನಂದನೆ ಸಲ್ಲಿಸಿದರು.



