ಮೂಡಬಿದ್ರೆ: ಮನೆಯವರ ಸಂಪರ್ಕಕ್ಕೆ ಸಿಗದೆ ದೂರವಾಗಿದ್ದ ಮನೆ ಮಗ ವಾಪಸ್ ಕುಟುಂಬ ಸೇರಿದ ಘಟನೆ ಮೂಡಬಿದ್ರೆ ತಾಲೂಕಿನ ಇರುವೈಲು ಗ್ರಾಮದ ಕೊನ್ನೆಪದವು ಸಮೀಪದ ಮಧುವನಗಿರಿಯಲ್ಲಿ ನಡೆದಿದೆ.
ಮಧುವನಗಿರಿಯ ನಿವಾಸಿಯಾಗಿರುವ ಚಂದ್ರಶೇಖರ್ ಅವರು 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಸುಮಾರು 7 ತಿಂಗಳು ಪತ್ರ ಮುಖೇನ ಮನೆಯವರ ಸಂರ್ಪದಲ್ಲಿದ್ದ ಅವರು, ಆ ಬಳಿಕ ಕುಟುಂಬದವರು ಹಾಗೂ ಪರಿಚಿತರ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದರು ಎಂದು ತಿಳಿದುಬಂದಿದೆ.

ಕೆಲವು ತಿಂಗಳ ಹಿಂದೆ ನಡೆದ ಮಂತ್ರದೇವತೆಯ ದರ್ಶನದ ವೇಳೆ ಮನೆ ಮಗ ಬದುಕಿದ್ದಾರೆ. ಮುಂದೆ ನಡೆಯುವ ದರ್ಶನದಲ್ಲಿ ದೈವದ ಚಾಕಿರಿ ಹಿರಿಯ ಮಗನಿಂದಲೇ ನಡೆಯಬೇಕೆಂದು ಎಂದು ಅಭಯ ನೀಡಿತ್ತು.ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಅವರು ಮನೆ ಸೇರಿದ್ದಾರೆ. ಇಲ್ಲಿ ಬರುವವರೆಗೂ ಅವರ ಮಾನಸಿಕ ಆರೋಗ್ಯದಲ್ಲಿ ತುಸು ವ್ಯತ್ಯಾಸಗಳಿದ್ದು, ಮನೆಗೆ ಬಂದ ಬಳಿಕ ಭಾಗಶಃ ಗುಣಮುಖರಾಗಿದ್ದಾರೆ.
ಊರಿನಲ್ಲಿ ಮೂರನೇ ತರಗತಿವರೆಗೆ ಕಲಿತಿದ್ದ ಅವರು ಬಳಿಕ ಮುಂಬಯಿಯಲ್ಲಿ 2–3 ವರ್ಷ ಸಂಜೆ ಶಾಲೆಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಮದುವೆಯಾಗಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.

ತಾಯಿಗೆ 80 ವರ್ಷ ಪ್ರಾಯವಾಗಿದೆ. “36 ವರ್ಷಗಳ ಹಿಂದೆ ಮುಂಬಯಿ ಸೇರಿದ ನಮ್ಮಣ್ಣನಿಗೆ ಈಗ 60 ವರ್ಷ. ಈಗಲಾದರೂ ಬಂದಿರುವರಲ್ಲ ಎಂಬುದೇ ಸಂತೋಷದ ಸಂಗತಿ” ಎಂದು ಚಂದ್ರಶೇಖರ ಅವರ ಸಹೋದರ ಪ್ರಭಾಕರ ತಿಳಿಸಿದ್ದಾರೆ.
ಮನೆಯವರ ಪ್ರಾರ್ಥನೆ, ದೈವ-ದೇವರ ಕೃಪೆಯಿಂದ ಮತ್ತೆ ನಾನು ನನ್ನ ಕುಟುಂಬವನ್ನು ಸೇರಿದ್ದೇನೆ. ಇನ್ನೂ ಕೆಲವು ವರ್ಷ ಮುಂಬಯಿಯಲ್ಲಿ ದುಡಿಯಬೇಕೆಂದಿದ್ದೇನೆ. ಇನ್ನು ಮನೆಯವರ ಸಂಪರ್ಕದಲ್ಲಿರುತ್ತಾ, ಮುಂದೆ ಮನೆಯಲ್ಲಿ ನಡೆಯುವ ದೈವ-ದೇವರ ಕೆಲಸ, ಸಮಾರಂಭಗಳಿಗೆ ತಪ್ಪದೇ ಬರುತ್ತೇನೆ ಎಂದು ಚಂದ್ರಶೇಖರ ತಿಳಿಸಿದ್ದಾರೆ.


