ಕಾಸರಗೋಡು: ಆಕಸ್ಮಿಕವಾಗಿ ಬಾಲಕನೋರ್ವ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಘಟನೆ ಕೇರಳದ ಕಾಸರಗೋಡಿನ ಬಂದ್ಯೋಡು ಸಮೀಪದ ಕೊಕ್ಕೆಚಾಲ್ ಎಂಬಲ್ಲಿ ಜೂನ್ 16 ರ ಮಧ್ಯಾಹ್ನ ಸಂಭವಿಸಿದೆ.
ಮೃತಪಟ್ಟ ಬಾಲಕ ಕೊಕ್ಕೆಚಾಲ್ ನಿವಾಸಿ ಸಾದತ್ ಎಂಬವರ ಪುತ್ರ ಸುಲ್ತಾನ್ (7) ಎಂದು ಗುರುತಿಸಲಾಗಿದೆ.

ಮನೆ ಸಮೀಪ ಆಟವಾಡುತ್ತಿದ್ದ ಸುಲ್ತಾನ್ ಏಕಾಏಕಿ ನಾಪತ್ತೆಯಾಗಿದ್ದು, ಗಾಬರಿಗೊಂಡ ಮನೆಯವರು ಎಲ್ಲ ಕಡೆ ಹುಡುಕಾಟ ಆರಂಭಿಸಿದರು. ಬಾಲಕನ ಸುಳಿವು ಸಿಗದ ಬಳಿಕ ಸಮೀಪದ ತೋಡಿನಲ್ಲಿ ಕೊಚ್ಚಿ ಹೋಗಿರಬಹುದೇ ಎಂಬ ಶಂಕಿಸಿ ಉಪ್ಪಳದ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ಬಳಿಕ ನಡೆದ ಶೋಧ ಕಾರ್ಯದಲ್ಲಿ ಮನೆಯಿಂದ 500 ಮೀಟರ್ ದೂರದ ತೋಡಿನ ಬದಿಯ ಪೊದೆಯಲ್ಲಿ ಬಾಲಕ ಸಿಲುಕಿರುವುದು ಪತ್ತೆಯಾಗಿದೆ.

ತಕ್ಷಣ ಬಂದ್ಯೋಡಿನ ಆಸ್ಪತ್ರೆಗೆ ಬಾಲಕನನ್ನು ಕರೆದೊಯ್ಯಲಾಯಿತಾದರೂ ಬಾಲಕ ಮೃತ ಪಟ್ಟಿದ್ದನು ಎಂದು ತಿಳಿದುಬಂದಿದೆ.
ಮನೆ ಸಮೀಪವಿದ್ದ ತೋಡಿಗೆ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.


