ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಕೃಷಿ ಹಾನಿ ಮಾಡಿದ ಘಟನೆ ಜೂನ್ 16ರಂದು ನಡೆದಿದೆ.
ಚಾರ್ಮಾಡಿಯ ಮಠದಮಜಲು ಗ್ರಾಮದ ಅನಂತರಾಮ ರಾವ್ ಅವರ ತೋಟಕ್ಕೆ ಜೂನ್ 16ರ ಮುಂಜಾನೆ 3 ಗಂಟೆ ಸುಮಾರಿಗೆ ಕಾಡಾನೆಗಳ ಹಿಂಡು ನುಗ್ಗಿ 250ಕ್ಕಿಂತ ಹೆಚ್ಚು ಅಡಿಕೆ ಮರ, 2 ತೆಂಗು, ಬಾಳೆಗಿಡ, ಹಲಸಿನ ಮರ ಹಾಗೂ 3 ಸೋಲಾರ್ ಬೇಲಿ ಕಂಬಗಳನ್ನು ಧ್ವಂಸಮಾಡಿದೆ.

ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ನಡೆಯುತ್ತಿದ್ದು, ಆನೆ ದಾಳಿಗೆ ಸ್ವಲ್ಪ ಮೊದಲಷ್ಟೇ ತಂಡ ಇಲ್ಲಿಂದ ಬೇರೆಡೆ ತೆರಳಿತ್ತು.
ಮೇ 27ರಂದು ಸಹ ಇದೇ ಪರಿಸರದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ 125ಕ್ಕೂ ಹೆಚ್ಚು ಅಡಿಕೆ ಮರ ನಾಶಪಡಿಸಿತ್ತು. ಜೂನ್ 6ರಂದು ಈ ಕಾಡಾನೆಗಳ ಹಿಂಡು ಧರ್ಮಸ್ಥಳದ ಬಳಿ ಕಂಡು ಬಂದಿದ್ದು, ಅದೇ ಹಿಂಡು ಈಗ ಮತ್ತೆ ಚಾರ್ಮಾಡಿಗೆ ಮರಳಿರುವ ಶಂಕೆ ವ್ಯಕ್ತವಾಗಿದೆ.

ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಹಾನಿಗೆ ಸಿಲುಕುತ್ತಿರುವ ಕೃಷಿಕರು ಅರಣ್ಯ ಇಲಾಖೆಯತ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


