ಕಾಸರಗೋಡು: ದೈವ ನರ್ತಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಆತನ ಸ್ನೇಹಿತನನ್ನು ವಶಕ್ಕೆ ಪಡೆದ ಘಟನೆ ಕಾಸರಗೋಡುವಿನ ಮುಳ್ಳೇರಿಯ ಸಮೀಪದ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ನರ್ತಕ ಟಿ. ಸತೀಶನ್ ಯಾನೆ ಬಿಜು (46) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಆರೋಪಿಯಾದ ಸ್ನೇಹಿತ ಚಿದಾನಂದನನ್ನು (32) ಪೊಲೀಸರು ಬಂಧಿಸಿದ್ದಾರೆ.

ಜೂನ್ 9, 2025 ರಂದು ಕೊಲೆಯಾದ ಸತೀಶನ್ ಮತ್ತು ಆರೋಪಿತ ಚಿದಾನಂದ ಇಬ್ಬರು ಚಂದನಕ್ಕಾಡಿನ ದೇಲಂಪಾಡಿ ಗ್ರಾಮ ಪಂಚಾಯಿತಿಯ ನೆರೆಮನೆಯವರಾದ ಚೋಮಣ್ಣ ನಾಯ್ಕ ಅವರ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಘಟನೆ ನಡೆಯುವ ದಿನ ಮಧ್ಯಾಹ್ನ, ಮದ್ಯ ಸೇವನೆ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪಗೊಂಡ ಚಿದಾನಂದ ಸತೀಶನ್ನನ್ನು ಹಿಂದಿನಿಂದ ತಳ್ಳಿದ್ದ ಎನ್ನಲಾಗಿದೆ. ಇದರಿಂದ ಸತೀಶನ್ ಕೆಳಗೆ ಬಿದ್ದು, ತಲೆ ನೆಲಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದರು ಅಂತ ಹೇಳಲಾಗುತ್ತಿದೆ.
ಬಳಿಕ, ಚಿದಾನಂದ ಮತ್ತು ಇನ್ನೊಬ್ಬರ ಸಹಾಯದಿಂದ ಸತೀಶನ್ನನ್ನು ಮನೆಯ ವರಾಂಡದಲ್ಲಿ ಮಲಗಿಸಲಾಗಿತ್ತು. ನೋವಿನಿಂದ ಕೂಗಾಡಿದಾಗ, ಚಿದಾನಂದ ಸತೀಶನ್ಗೆ ಮೂವ್ ಮುಲಾಮು ಹಚ್ಚಿ, ನೋವು ನಿವಾರಕ ಮಾತ್ರೆ ನೀಡಿದ್ದ. ಆದರೆ, ಸತೀಶನ್ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಚಿದಾನಂದ ಅವರನ್ನು ನಿದ್ರೆಯಲ್ಲಿದ್ದಾರೆಂದು ಭಾವಿಸಿ ಮನೆಗೆ ಮರಳಿದ್ದ.

ಜೂನ್ 10 ಸತೀಶನ್ ಮನೆಗೆ ಬಾರದಿರುವುದರಿಂದ ಆತನ ಸಹೋದರಿ ಸೌಮಿನಿ ಚೋಮಣ್ಣನ ಮನೆಗೆ ಭೇಟಿ ನೀಡಿದಾಗ, ಸತೀಶನ್ ವರಾಂಡದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದ. ಕೂಡಲೇ ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಎಲುಬು ಮುರಿದಿರುವುದು, ದೇಹದ ಹಿಂಭಾಗದಲ್ಲಿ ಆಂತರಿಕ ಗಾಯಗಳು ಕಂಡುಬಂದಿವೆ.
ಇತ್ತ ಚಿದಾನಂದ ಸತೀಶನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರುವುದು ಪೊಲೀಸರಿಗೆ ಸಂಶಯ ಹುಟ್ಟಿಸಿದೆ. ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ ಮತ್ತು ಇನ್ಸ್ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ನೇತೃತ್ವದ ತಂಡ ಚಿದಾನಂದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿದೆ.

