ಕಾರ್ಕಳ: ಮಗುವಿಗೆ ಐಸ್ ಕ್ರೀಂ ತರಲೆಂದು ಮನೆಯಿಂದ ಪೇಟೆಗೆ ಬಂದು ವಾಪಸ್ ಮನೆಗೆ ತೆರಳುವಾಗ ವ್ಯಕ್ತಿಯೊಬ್ಬ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪರಪು ಜೂ. 7 ರ ರಾತ್ರಿಯ ವೇಳೆ ನಡೆದಿದೆ.
ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ನಿವಾಸಿ, ಆಟೋ ಚಾಲಕ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಸುಬ್ರಹ್ಮಣ್ಯ ಅವರು ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲೆಂದು ಸ್ಕೂಟಿಯಲ್ಲಿ ಮನೆಯಿಂದ ಪೇಟೆಗೆ ಬಂದಿದ್ದು ವಾಪಸ್ ಮನೆಗೆ ತೆರಳುವಾಗ ಪರಪು ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಸಹಿತ ಹೊಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿಯಿಡೀ ಹುಡುಕಾಡಿದ್ರೂ ಸುಬ್ರಹ್ಮಣ್ಯ ಅವರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಊರವರು ಹುಡುಕುವಾಗ ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ ಕೃಷ್ಣ ಸಾಲ್ಯಾನ್, ತಾಯಿ ಕೌಶಲ್ಯ, ತಂಗಿ ಆಶಾ, ಪತ್ನಿ ಮಣಿಶಾ, ಪುತ್ರಿ ತಸ್ಮಯಿಯನ್ನು ಅಗಲಿದ್ದಾರೆ.



