ಬಂಟ್ವಾಳ: 13ನೇ ವಯಸ್ಸಲ್ಲಿ ಮನೆಬಿಟ್ಟ ವ್ಯಕ್ತಿ 75 ವರ್ಷಕ್ಕೆ ಮನೆಗೆ ವಾಪಾಸ್!

ಬಂಟ್ವಾಳ: ಸ್ಥಳೀಯ ನಿವಾಸಿಯೊಂದಿಗೆ ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬೈ ಸೇರಿದ್ದ ವ್ಯಕ್ತಿಯೋರ್ವರು 62 ವರ್ಷಗಳ ಬಳಿಕ ಮನೆಗೆ ವಾಪಸ್ಸಾಗಿ ಮನೆಮಂದಿಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್‌ ಸಂಜೀವ ಪೂಜಾರಿ (75) ಅವರು ಕೆಲಸಕ್ಕಾಗಿ ಮುಂಬಯಿಗೆ ತೆರಳಿ ಮನೆಮಂದಿಯ ಸಂಪರ್ಕವನ್ನೂ ಕಳೆದುಕೊಂಡಿದ್ದರು.

ಅಂದು ಮನೆಯವರು ಸಂಜೀವ ಪೂಜಾರಿಯವರನ್ನು ಹುಡುಕಲು ಎಷ್ಟೇ ಪ್ರಯತ್ನಿಸಿದರು ಸಿಕ್ಕಿರಲಿಲ್ಲ. ಮುಂಬೈಯಲ್ಲಿ ಹಲವಾರು ಕಡೆ ಕೆಲಸ ಮಾಡಿ ಬಳಿಕ ಯಾವುದೋ ಲಾರಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಜೊತೆಗೆ ಮತ್ತೆ ಬೇರೆ ಬೇರೆ ಕೆಲಸ ಮಾಡಿ ಕಳೆದ 2ವರ್ಷಗಳಿಂದ ಮುಂಬಯಿಯ ಹೊಟೇಲೊಂದರಲ್ಲೂ ದುಡಿದು ಅಲ್ಲಿ ಮಾಲಕ ಸಂಬಳ ಕೊಟ್ಟಿಲ್ಲ ಎಂದು ಮನೆ ದಾರಿ ಹಿಡಿದು ಮನೆಗೆ ಬಂದಿದ್ದಾರೆ.

ಜೂ. 4ರಂದು ಮುಂಬೈಯಿಂದ ಬಸ್ಸಿನಲ್ಲಿ ಹೊರಟು ಗುರುವಾರ (ಜೂ.05) ರಂದು ಮಧ್ಯಾಹ್ನ ಮಂಗಳೂರಿಗೆ ತಲುಪಿ ಅಲ್ಲಿಂದ ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಮನೆ ಸೇರಿದ್ದಾರೆ.

65 ವರ್ಷಗಳ ಬಳಿಕ ಮನೆ ಮಗನನ್ನು ನೋಡಿದ ಮನೆಮಂದಿ ಆಶ್ಚರ್ಯದಿಂದ ಈವರೆಗೆ ಎಲ್ಲಿದೆ ಎಂದು ವಿಚಾರಿಸಿದ್ದಾರೆ.

Leave a Reply

Your email address will not be published. Required fields are marked *