ಪುತ್ತೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಮೂಲಕ ಮುಟ್ಟಿ ನೋಡಿಕೊಳ್ಳುವ ಹಾಗೆ ದಿಟ್ಟ ಉತ್ತರವನ್ನು ಕೊಟ್ಟಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಿಂದಗಿ ಕೆಮ್ಮಾಯಿಯ ಪದ್ಮನಾಭ ಗೌಡರನ್ನು ಗೌರವಿಸುವ ಕಾರ್ಯಕ್ರಮ ಇಂದು ನಡೆದಿದೆ. ಅತ್ಯಂತ ರಹಸ್ಯವಾಗಿ ಪ್ಲಾನ್ ಮಾಡಿದ ಕಾರ್ಯಾಚರಣೆಯ ಬಳಿಕ ಸೈನಿಕರಿಗೆ ಕೆಲವು ದಿನಗಳ ಆರಾಮವನ್ನು ನೀಡಲಾಗಿದ್ದು, ಇದೇ ರೀತಿ ಮನೆಗೆ ಬಂದ ಪದ್ಮನಾಭ ಗೌಡರಿಗೆ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗೌರವ ಸಲ್ಲಿಸಲಾಗಿದೆ.

ಕಾರ್ಯಾಚರಣೆಯ ಭಾಗವಾಗಿ ಇದ್ದ ತಂಡವೊಂದರ ನೇತೃತ್ವ ವಹಿಸಿಕೊಂಡಿದ್ದ ಪದ್ಮನಾಭ ಗೌಡ ಕಳೆದ ನಲ್ವತ್ತು ವರ್ಷದಿಂದ ಬಿಎಸ್ಎಫ್ ನಲ್ಲಿ ಸೈನಿಕನಾಗಿ ದುಡಿಯುತ್ತಿದ್ದಾರೆ. ಓರ್ವ ಸೈನಿಕನಿಗೆ ದೇಶದ ಜನರೇ ಬಲವಾಗಿದ್ದು, ದೇಶದ ಜನರೆಲ್ಲಾ ಸೈನಿಕನ ಹಿಂದೆ ಇದ್ದಾರೆ ಎಂದು ತಿಳಿದಾಗ ಸೈನಿಕನಲ್ಲಿ ದೈರ್ಯ ದುಪ್ಪಟ್ಟಾಗುತ್ತದೆ ಎನ್ನುವುದು ಪದ್ಮನಾಭ ಗೌಡರ ಅಭಿಪ್ರಾಯ. ಸೈನಿಕ ಯಾವುದೇ ಫಲಾಪೇಕ್ಷೆಗಳಿಲ್ಲದೆ ದೇಶಕ್ಕಾಗಿ ದುಡಿಯುತ್ತಿದ್ದು, ಪ್ರತಿಯೊಬ್ಬ ಭಾರತೀಯ ಸೈನದ ಜೊತೆ ನಿಲ್ಲಬೇಕು ಎನ್ನುತ್ತಾರೆ ಪದ್ಮನಾಭ ಗೌಡ.

ಪುತ್ತೂರಿನ ಪ್ರತಿಷ್ಠಿತ ಮನೆತನಕ್ಕೆ ಸೇರಿದ ಪದ್ಮನಾಭ ಗೌಡರ ಕುಟುಂಬದ ಮೂವರು ಸದಸ್ಯರು ಭಾರತೀಯ ಸೇನೆಯಲ್ಲಿ ದುಡಿದವರಾಗಿದ್ದು, ಎಳವೆಯಿಂದಲೇ ಭಾರತದ ಸೈನ್ಯದಲ್ಲಿ ಸೇರಬೇಕೆನ್ನುವ ಇಚ್ಛೆ ಪದ್ಮನಾಭ ಗೌಡರದ್ದಾಗಿತ್ತು. ತಮ್ಮ ಇಚ್ಛೆಯನ್ನು ಸುಮಾರು 40 ವರ್ಷಗಳ ಹಿಂದೆಯೇ ಪೂರೈಸಿಕೊಂಡಿರುವ ಪದ್ಮನಾಭ ಗೌಡರು ಮುಂದೆಯೂ ದೇಶಕ್ಕಾಗಿ ದುಡಿಯಲು ಸಿದ್ಧವಾಗಿದ್ದಾರೆ.

