ಬೆಳ್ತಂಗಡಿ: ರಿಕ್ಷಾ ಚಾಲಕರೊಬ್ಬರು ರಿಕ್ಷಾ ಚಾಲನೆಯಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿನ ಎಂಬಲ್ಲಿ ಜೂನ್.3 ರಂದು ನಡೆದಿದೆ.
ಕೆಂಪಕೋಡಿನ ನಿವಾಸಿ ರಘುರಾಮ ಮಡಿವಾಳ ಅವರ ಪುತ್ರ, ರಿಕ್ಷಾ ಚಾಲಕ ಶರತ್ ಕುಮಾರ್ ಕೆ. (36) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಶರತ್ ಕುಮಾರ್ ಅವರು ಪ್ರತಿದಿನದಂತೆ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರುಪಯಣದಲ್ಲಿ ತಮ್ಮ ಸ್ವಂತ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಲಾಯಿಸುವ ನಡುವೆಯೇ ಸಾವನ್ನಪ್ಪಿದ್ದಾರೆ.
ಮೃತರು ತಂದೆ ರಘುರಾಮ ಮಡಿವಾಳ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.



