ಮಂಗಳೂರು: ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿಯಲ್ಲಿ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ನಿಟ್ಟಿನಲ್ಲಿ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳಾದ ಬಿ.ಸಿ.ರೋಡ್ ಪೊಳಲಿ, ಅಡ್ಡೂರು, ಫರಂಗಿಪೇಟೆ, ತುಂಬೆ ಸುತ್ತ ಮುತ್ತ ಸ್ವಯಂಘೋಷಿತ ಬಂದ್ ಆಗಿದೆ. ಇತ್ತ ಇಂದು ಮಂಜಾನೆಯ ವೇಳೆ ಫರಂಗಿಪೇಟೆ ಸಮೀಪ ರಹ್ಮಾನ್ ಪಾರ್ಥೀವ ಶರೀರ ಸಾಗಾಟದ ನಡೆಯುತ್ತಿತ್ತು.

ಈ ಸಂದರ್ಭ ಜಮಾಯಿಸಿದ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.ನಗರದ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ರಹ್ಮಾನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಅಲ್ಲಿಗೂ ಜಮಾಯಿಸಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ ಮೃತದೇಹವನ್ನು ಆಸ್ಪತ್ರೆಯವರು ಮನೆಯವರಿಗೆ ಬಿಟ್ಟುಕೊಟ್ಟಿದ್ದಾರೆ. ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಪಡೀಲ್ ರಸ್ತೆಯ ಮೂಲಕ ಸಾಗಿಸಲಾಗಿದ್ದು, ನೂರಾರು ಮಂದಿ ಭಾಗಿಯಾಗಿದ್ದರು.

ಪೊಲೀಸರು ಬಿಗುಬಂದೋಬಸ್ತ್ ನೀಡಿದ್ದು, ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಗೆ ಸಾಗಿಸಿ ಅಲ್ಲಿ ಮಯ್ಯತ್ ಸ್ನಾನ ನಿರ್ವಹಿಸಲಾಯಿತು. ಮಯ್ಯತ್ ನಮಾಝ್ ಬಳಿಕ ಅಲ್ಲಿಂದ ಅಲ್ಲಿಂದ ಮತ್ತೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳ ತಾಲೂಕಿನ ಕೊಳತ್ತಮಜಲಿನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು.

ಕೃತ್ಯವನ್ನು ಖಂಡಿಸಿ ಫರಂಗಿಪೇಟೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿ, ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದ್ದಾರೆ.


