ಮಂಡ್ಯ: ಟೆಂಪೋ ಹಾದುಹೋಗಿ ಹೆತ್ತವರ ಮಡಿಲಲ್ಲೇ ಮಗು ಸಾವನ್ನಪ್ಪಿದ ಘಟನೆ ಮಂಡ್ಯದ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ ದಂಪತಿಯ ಪುತ್ರಿ 3ವರೆ ವರ್ಷದ ಹೃತೀಕ್ಷಾ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಹೃತೀಕ್ಷಾಗೆ ನಾಯಿಯೊಂದು ಕಚ್ಚಿತ್ತು. ಈ ವೇಳೆ ತುರ್ತು ಚಿಕಿತ್ಸೆಗಾಗಿ ಆಕೆಯನ್ನು ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಎಂದು ಏಕಾಏಕಿ ಅಡ್ಡಗಟ್ಟಿದ್ದಾರೆ.

ಪರಿಣಾಮ ಬೈಕ್ ಮಗುಚಿ ಬಿದ್ದು ರಸ್ತೆಗೆಸೆಯಲ್ಪಟ್ಟ ಮಗುವಿನ ಮೇಲೆ ಟೆಂಪೋ ಹಾದುಹೋಗಿದ್ದು, ಹೆತ್ತವರ ಮಡಿಲಲ್ಲೇ ಸಾವನ್ನಪ್ಪಿದೆ.

ತಮ್ಮ ಕಣ್ಣೆದುರೇ ಸಾವನ್ನಪ್ಪಿದ ಮಗುವನ್ನು ಮಡಿಲಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಗೋಳಾಡುತ್ತಿದ್ದ ಪೋಷಕರು ದೃಶ್ಯ ಕರುಳು ಹಿಂಡುವಂತಿತ್ತು.


