ಬಂಟ್ವಾಳ: ತುಂಬೆ ಗ್ರಾಮದ ಪರ್ಲಬೈಲಿನಲ್ಲಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಒಂದೇ ದಿನದಲ್ಲಿ ಹಿಡಿದು, ಕಳವು ಮಾಡಿದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಪರ್ಲಬೈಲು ನಿವಾಸಿ ಹಸನ್ ಬಾವಾ ಎಂದು ಗುರುತಿಸಲಾಗಿದೆ.

ಮೇ 19ರಂದು ಪರ್ಲಬೈಲು ಹಾಮದ್ ಹಾಜಿ ರಸ್ತೆಯ ನಿವಾಸಿ ಅಬ್ದುಲ್ ಮಜೀದ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲಲ್ಲೇ ಮನೆಯ ಮೇಲ್ಛಾವಣಿಯ ಹಂಚನ್ನು ತೆಗೆದು ಒಳಗೆ ನುಗ್ಗಿ ಕಪಾಟಿನಲ್ಲಿ ಇಟ್ಟಿದ್ದ ಚಿನ್ನದ ಹಾರವನ್ನು ಕದ್ದಿದ್ದ. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಒಂದೇ ದಿನದಲ್ಲಿ ಕಳ್ಳನನ್ನು ಹಿಡಿದು ಕಳವು ಮಾಡಿದ 1.49 ಲಕ್ಷ ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಹಾರವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಡಿಶನಲ್ ಎಸ್ಪಿ ರಾಜೇಂದ್ರ ಹಾಗೂ ಬಂಟ್ವಾಳ ಡಿವೈಎಸ್ಪಿ ಎಸ್. ವಿಜಯಪ್ರಸಾದ್ ಅವರ ಮಾರ್ಗದರ್ಶನದಂತೆ ಬಂಟ್ವಾಳ ಗ್ರಾಮಾಂತರ ಇನ್ಸ್ಪೆಕ್ಟರ್ ಶಿವಕುಮಾರ್ ಬಿ. ನೇತೃತ್ವದಲ್ಲಿ ಪಿಎಸ್ಐಗಳಾದ ಮಂಜುನಾಥ ಟಿ., ಖೀರಪ್ಪ ಘಟಕಾಂಬಳೆ, ಎಎಸ್ಐಗಳಾದ ಗಿರೀಶ್, ಬಾಲಕೃಷ್ಣ, ಎಚ್ಸಿಗಳಾದ ನಝೀರ್, ಹರಿಶ್ಚಂದ್ರ, ಲೋಕೇಶ್, ಕೃಷ್ಣ ನಾಯ್ಕ, ಪಿಸಿ ಸಹದೇವ ಭಾಗಿಯಾಗಿದ್ದರು.



