ಬಂಟ್ವಾಳ: ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವು ಜುಲೈ 27ರ ರವಿವಾರ ಮೂಡುಪಡುಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಮೂವರು ವ್ಯಕ್ತಿಗಳ ಜೀವ ಉಳಿಸಲು ಸಾಧ್ಯ. ರಕ್ತದಾನ ಪವಿತ್ರ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಇದರಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ರಕ್ತದ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಶಿಬಿರ ಆಯೋಜಿಸಿದ ಶಾರದೋತ್ಸವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.


ಮಡಂತ್ಯಾರು ರೋಟರಿ ಕ್ಲಬ್ನ ಪ್ರಶಾಂತ್ ಶೆಟ್ಟಿ ಮೂಡಾಯೂರು ಶಿಬಿರವನ್ನು ಉದ್ಘಾಟಿಸಿ, ಜಾತಿ, ಮತ, ಧರ್ಮದ ಭೇದವಿಲ್ಲದೆ ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಪುಣ್ಯ ಕಾರ್ಯವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನವು ವ್ಯಕ್ತಿಯೊಬ್ಬರು ಮಾಡಬಹುದಾದ ಅತ್ಯುತ್ತಮ ನಿಸ್ವಾರ್ಥ ಸೇವೆಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಸದಸ್ಯರು ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಬಿ.ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಶುಭ ಹಾರೈಸಿದರು.

ಸಮಿತಿ ಕಾರ್ಯಾಧ್ಯಕ್ಷ ಹರೀಂದ್ರ ಟಿ. ಪೈ, ನಯನಾಡು ಗೆಳೆಯರ ಬಳಗದ ಸಂಚಾಲಕ ನೆಲ್ವಿಸ್ಟರ್ ಪಿಂಟೊ, ದೇರೊಟ್ಟು ಮಾತಾ ಫೆರ್ನಾಂಡಿಸ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡೆನಿಸ್ ಫೆರ್ನಾಂಡಿಸ್ ದೇರೊಟ್ಟು, ಚೈನ್ನೈತ್ತೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜಪ್ಪ ಮೂಲ್ಯ ಅತ್ತಾಜೆ, ಉದ್ಯಮಿ ಶೇಖರ ಪೂಜಾರಿ ಅಗಲ್ದೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಲಿನಿ, ಕಜೆಕೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಪುಂಜಾಲಕಟ್ಟೆ ಶೌರ್ಯ ಘಟಕದ ಮೋಹನ ಸಾಲ್ಯಾನ್, ವಗ್ಗ ವಲಯ ಮೇಲ್ವಿಚಾರಕ ಚಂದ್ರಶೇಖರ್, ಜ್ಞಾನ ವಿಕಾಸ ಕೇಂದ್ರದ ಮೇಲ್ವಿಚಾರಕಿ ಅಶ್ವಿನಿ, ರೋಟರಿ ಕ್ಲಬ್ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ. ಪ್ರಮುಖರಾದ ಅಬ್ದುಲ್ ನಜೀರ್ ಸಾಹೇಬ್, ರಂಜಿತ್ ಶೆಟ್ಟಿ ಅರ್ಕೆದೊಟ್ಟು, ಜಹೀರ್ ಇರ್ವತ್ತೂರು, ಸತೀಶ ಕರ್ಕೇರಾ, ಹರೀಶ್ ಶೆಟ್ಟಿ ಕುಮೇರ್, ಇಬ್ರಾಹಿಂ ಇರ್ವತ್ತೂರು, ಸತೀಶ್ ಪೂಜಾರಿ ಬೆನಕ, ಸುಪ್ರಿತ್ ಜೈನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಮೃತಾ ಎಸ್. ಪ್ರಾರ್ಥಿಸಿದರು. ಡಾ. ರಾಮಕೃಷ್ಣ ಎಸ್. ಸ್ವಾಗತಿಸಿ ಪ್ರಸ್ತಾವಿಸಿದರು. ದಯಾನಂದ ಎರ್ಮೆನಾಡು ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 110 ಮಂದಿ ರಕ್ತದಾನ ಮಾಡಿದರು.


