ವಿಟ್ಲ: ಗೋಸೇವಾ ಗತಿವಿಧಿ ಕರ್ನಾಟಕ,ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ) ಪುದು ಬಂಟ್ವಾಳ ತಾಲೂಕು ಇವುಗಳ ಆಶ್ರಯದಲ್ಲಿ ನಂದಿ ರಥಯಾತ್ರೆ ರಾಜ್ಯದ ಹಲವು ಜಿಲ್ಲೆಗಳಾದ್ಯಂತ ಸಂಚರಿಸುತ್ತಿದ್ದು, ಮಾ.23 ರಂದು ವಿಟ್ಲ ನಗರಕ್ಕೆ ಆಗಮಿಸಲಿದೆ.
ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ರಥಯಾತ್ರೆಯ ಬಗ್ಗೆ ವಿವರಣೆ ನೀಡಿದ ವಿಟ್ಲ ಸಮಿತಿ ಅಧ್ಯಕ್ಷ ಅಧ್ಯಕ್ಷ ಮೋಹನ್ ಗೌಡ ಕಾಯರ್ ಮಾರ್, ಗೋತಳಿಗಳ ಸಂರಕ್ಷಣೆ, ದೇಸಿ ತಳಿಗಳಿಗೆ ಪ್ರೋತ್ಸಾಹ, ಕೃಷಿ ನೆಲ ಜಲ ಸಂಸ್ಕೃತಿ ಗೆ ಪೂರಕ ವಿಚಾರ ವಿನಿಮಯ, ಬೀಜ ಸಂರಕ್ಷಣೆ , ಉದ್ಯೋಗ ಸೃಷ್ಟಿ ಇನ್ನಿತರ ನಾನಾ ಸದುದ್ದೇಶಗಳನ್ನಿಟ್ಟುಕೊಂಡು, 2024 ಡಿ. 31 ರಂದು ಪೊಳಲಿ ರಾಧಾಸುರಭಿ ಗೋಮಂದಿರದಿಂದ ಹೊರಟ ರಥಯಾತ್ರೆ ಮಾ. 29 ರ ವರೆಗೆ ನಡೆಯಲಿದ್ದು, ಮಾ.23 ರಂದು ಸಂಜೆ 5 ಗಂಟೆಗೆ ವಿಟ್ಲ ಜೈನ ಬಸದಿ ಬಳಿ ರಥವನ್ನು ಸ್ವಾಗತಿಸಲಾಗುವುದು.
ಬಳಿಕ ಸ್ಯಾಕ್ಸೋಫೋನ್, ಚೆಂಡೆಮೇಳ, ಶಂಖ, ಜಾಗಟೆ, ಕುಣಿತ ಭಜನೆಯೊಂದಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ಭವ್ಯ ಶೋಭಾಯಾತ್ರೆಯ ಮೂಲಕ ಸಾಗಲಿದೆ. ದೇಗುಲದಲ್ಲಿ ನಂದಿ ಪೂಜೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಗೋಕತೆ ನಡೆಯಲಿದೆ. ನೂರು ರೂ. ನೀಡಿ ನಂದಿ ಪೂಜೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. 150 ರೂ. ಬೆಲೆಯ ಗೋಮಯ ಹಣತೆ ಕಿಟ್ ಲಭ್ಯ ಇರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಸೇರಾಜೆ, ಕಾರ್ಯದರ್ಶಿ ಜಗದೀಶ ಪಾಣೆಮಜಲು, ಉಪಾಧ್ಯಕ್ಷ ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ಕೋಶಾಧಿಕಾರಿ ರಾಧಾಕೃಷ್ಣ ಕೂಡೂರು ಉಪಸ್ಥಿತರಿದ್ದರು.




