ಬಂಟ್ವಾಳ: ಚರಂಡಿಯಲ್ಲಿ ಹೂಳು ತುಂಬಿದ ಪರಿಣಾಮ ಮಳೆ ನೀರು ಸರಿಯಾಗಿ ಹರಿದು ಹೋಗದೆ ರೈತರ ಕೃಷಿ ಭೂಮಿಗೆ ನುಗ್ಗಿ ಪ್ರತಿ ವರ್ಷ ಲಕ್ಷಾಂತರ ರೂ ನಷ್ಟ ಸಂಭವಿಸುವ ಬಗ್ಗೆ ಇತ್ತೀಚಿಗೆ ಬಿಸಿರೋಡಿನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರಿಗೆ ನೀಡಿದ ದೂರಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ನರಿಕೊಂಬು ಗ್ರಾಮದ ನಾಯಿಲ, ಮಾರ್ಲಿಮಾರು, ಕೋಮೆ, ರಂಗೇಲು, ಬೋಂಡಾಲ ಮೊದಲಾದ ಪ್ರದೇಶದ ರೈತರು ಪ್ರತಿ ವರ್ಷ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಆಲಡ್ಕ, ಡೆಂಜೀಪಾಡಿಯಿಂದ ನಾಯಿಲ ತನಕ ಹರಿದು ಹೋಗುವ ತೋಡಿನಲ್ಲಿ ಹೂಳು ತುಂಬಿದರ ಪರಿಣಾಮ ತಮ್ಮ ಹೊಲ ಗದ್ದೆಗಳ ಲ್ಲಿ ನೀರು ನಿಂತು ಕಳೆದ ನಾಲ್ಕು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು.




ಈ ಬಗ್ಗೆ ಬಿಸಿ ರೋಡಿನಲ್ಲಿ ಜರಗಿದ ಸಚಿವರ ಜನತಾದರ್ಶನ ಕಾರ್ಯಕ್ರಮದಲ್ಲಿ ರೈತರ ಪರ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಲಿಖಿತ ಮನವಿಯನ್ನು ನೀಡಿದ್ದರು ಮನವಿಗೆ ಸ್ಪಂದಿಸಿ ಮಹಜರು ನಡೆಸಲು ನರಿಕೊಂಬು ಗ್ರಾಮ ಪಂಚಾಯಿತಿ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಆಲಡ್ಕದಲ್ಲಿ ನೂತನ ಸೇತುವೆ ನಿರ್ಮಾಣಗೊಂಡು ಅದರ ಅಡಿಯಲ್ಲಿ ಕಲ್ಲು ಮಣ್ಣು ಶೇಖರಣೆ ಹಾಗೆ ಉಳಿದಿದ್ದು ಹಾಗೂ ರಾಜ ಕಾಲುವೆ ಒತ್ತುವರಿಯನ್ನು ಸರಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು.




ರೈತ ಸಂಘದ ಕಾರ್ಯದರ್ಶಿ ಸುದೇಶ್ ಮೈಯ್ಯ, ಭೋಜ ಮೂಲ್ಯ, ಲಕ್ಷ್ಮಣ,ಭಾಸ್ಕರ್, ಸೀತಾರಾಮ, ಅಶೋಕ,ಜಯಂತ ಕೃಷ್ಣಪ್ಪ,ವೆಂಕಪ್ಪ ಮೊದಲಾದವರು ರೈತರಿಗಾಗುವ ಕಷ್ಟದ ಬಗ್ಗೆ ಮಾಹಿತಿ ನೀಡಿದರು. ತೋಡಿನ ಹೂಳೆತ್ತುವ ಮೂಲಕ ನರಿಕೊಂಬು ಗ್ರಾಮದ ನೂರಾರು ಎಕ್ಕರೆ ರೈತರ ಕೃಷಿ ಭೂಮಿಯನ್ನು, ಅನ್ನದಾತನ ಬಹುಕಾಲದ ಸಮಸ್ಯೆಯನ್ನು ಪರಿಹರಿಸುವಂತೆ ಸರಕಾರವನ್ನು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಒತ್ತಾಯಿಸಿದರು.




