ಬಂಟ್ವಾಳ: ಫರಂಗಿಪೇಟೆ ನಿವಾಸಿ,ಕಾಲೇಜು ವಿದ್ಯಾರ್ಥಿ ದಿಗಂತ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದು ಈ ಕುರಿತು ತನಿಖೆಯನ್ನು ಚುರುಕುಗೊಳಿಸುವಂತೆ ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರದ ಮೂಲಕ ವಿನಂತಿ ಮಾಡಿದ್ದಾರೆ.
“ಕಳೆದ 2 ವರ್ಷಗಳಿಂದ ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಲವಾರು ಮಾನವ ಹತ್ಯೆ ಪ್ರಕರಣಗಳು ಸೇರಿದಂತೆ ಪೋಲಿಸ್ ಠಾಣೆಗಳ ಮೇಲೆ ದಾಳಿಗಳು ಒಳಗೊಂಡಂತೆ ಹಿರಿಯ ಪೋಲಿಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟದ ಜೊತೆಗೆ ದಾಳಿ ಆಗುತ್ತಿರುವುದು ಮಾಧ್ಯಮಗಳಿಂದ ಹಾಗೂ ಆಯಾ ಪ್ರದೇಶಗಳಲ್ಲಿನ ಸಿ ಸಿ ಟಿ ವಿ ಗಳಿಂದ ಸತ್ಯಾಸತ್ಯತೆ ತಿಳಿದು ಬರುತ್ತಿದೆ .
ಹಾಡು ಹಗಲೇ ಹಿಂದೂ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿದ್ದು ,ಅಲ್ಲಲ್ಲಿ ಹಿಂದೂಗಳ ಮೇಲೆ ದಾಳಿ ಪ್ರಕರಣ ಸೇರಿದಂತೆ ಹತ್ಯೆಗಳು ನಡೆಯುತ್ತಿವೆ . ಕೆಲವೊಂದು ಕಡೆಗಳಲ್ಲಿ ಅಂಗಡಿ ,ಮಳಿಗೆಗಳಿಗೆ , ಬೆಂಕಿ ಹಚ್ಚುವ ಪ್ರಕರಣಗಳು , ರಾಷ್ಟ್ರ ದ್ರೋಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗ ತೊಡಗಿವೆ .ಈ ಎಲ್ಲಾ ಪ್ರಕರಣಗಳಲ್ಲಿರುವ ಆರೋಪಗಳು ಸಿ.ಸಿ.ಟಿ.ವಿ ಹಾಗೂ ಮಾಧ್ಯಮಗಳ ದೃಶ್ಯಾವಳಿಯಲ್ಲಿ ಕಂಡು ಬಂದರೂ ಸಹ ಉನ್ನತ ಪೋಲಿಸ್ ಅಧಿಕಾರಿಗಳು ಯಾವುದೋ ಒಂದು ಮುಜುಗರದಲ್ಲಿ ಆರೋಪಿಗಳ ಮೇಲೆ ಯಾವುದೇ ಪ್ರಕರಣ ದಾಖಲಿಸದೇ ಜನಸಾಮಾನ್ಯರ ತೋರಿಕೆಗೆ ಸಲುವಾಗಿ ಕೆಲವೇ ಕೆಲವು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿಸುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ.
ಇದಕ್ಕೆಲ್ಲ ಪೂರಕವೆಂಬಂತೆ ಇತ್ತೀಚಿಗೆ ದ.ಕ ಜಿಲ್ಲೆ ಬಂಟ್ವಾಳ ತಾಲೂಕು ಫರಂಗಿಪೇಟೆ ನಿವಾಸಿ ದಿಗಂತ್ ಎಂಬ ಪಿ.ಯು.ಸಿ ಕಾಲೇಜು ವಿದ್ಯಾರ್ಥಿ ಧಿಡೀರನೆ ನಿಗೂಡವಾಗಿ ನಾಪತ್ತೆಯಾಗಿ 6-7 ದಿನಗಳೂ ಕಳೆದರೂ ವಿದ್ಯಾರ್ಥಿಯ ಬಗ್ಗೆ ಸುಳಿವು ಲಭಿಸದೇ ಇರುವುದರಿಂದ ಪೋಲಿಸ್ ಇಲಾಖಾ ತನಿಖೆಯ ಮೇಲೆ ಸಾರ್ವಜನಿಕರಿಗೆ ಅನುಮಾನ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿನ ಬಹುತೇಕ ವಿದ್ಯಾರ್ಥಿಗಳ ಪೋಷಕರು ಆಂತಕಕರ ಭಯದ ವಾತಾವರಣದಲ್ಲಿದ್ದಾರೆ

.ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಅಧಿಕಾರಿಗಳ ಹಾಗೂ ಪೋಲಿಸ್ ಠಾಣೆಗಳ ಮೇಲೆ ದಾಳಿ ಆಗುತ್ತಿರುವುದರ ಕಣ್ಣಿಗೆ ಕಾಣುತ್ತಿರುವುದರಿಂದ ಸಾರ್ವಜನಿಕರು ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯ ಮೇಲೆ ಇಟ್ಟಿರುವ ವಿಶ್ವಾಸ ಕಡಿಮೆಯಾಗುತ್ತಿದೆ .ಈ ಎಲ್ಲಾ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಪೋಲಿಸ್ ಮಹಾನಿರ್ದೇಶಕರು ಸೇರಿದಂತೆ ಉನ್ನತ ಮಟ್ಟದ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಕೇಂದ್ರದಿಂದ ಸೂಕ್ತ ನಿರ್ದೇಶನ ನೀಡಿ ಅಮಾಯಕರಿಗೆ ಆಗುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಾಗಿ ಈ ಮೂಲಕ ವಿನಂತಿ” ಮಾಡುತ್ತೇನೆಂದು ಪತ್ರದ ಮೂಲಕ ಕೊರಿದ್ದಾರೆ.




