Breaking
15 Sep 2026, Tue

ಬೆಳ್ತಂಗಡಿ: ಪದ್ಮುಂಜದಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ; ಸಾಧಕರಿಗೆ ಸನ್ಮಾನ

ಪದ್ಮುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಸೆ.12ರಂದು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವು ಉಮಾಮಹೇಶ್ವರ ಮಹಿಳಾ ಭಜನಾ ತಂಡ ಹಾಗೂ ಮಲೆಂಗಲ್ಲು ಭಜನಾ ಮಂಡಳಿಯವರ ಭಜನೆಯೊಂದಿಗೆ ಆರಂಭಗೊಂಡಿತು. ಬಳಿಕ ಶ್ರೀ ವಿನೋದ ಆರ್. ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಿಳೆಯರು, ಪುರುಷರು, ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಗಮನ ಸೆಳೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ದೇಶೀಯ ತಳಿ ಹೈನುಗಾರಿಕೆ ಹಾಗೂ ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಭೋಜ ಶೆಟ್ಟಿ ಪಣೆಕ್ಕರ, ಕಳೆದ 32 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಕಟೀಲು ಮೇಳದ ಕಲಾವಿದರಾಗಿರುವ ಸುನಿಲ್ ಭಂಡಾರಿ ಹಾಗೂ ವಿಕಲಚೇತನ ಮಕ್ಕಳ ವಿಶೇಷ ಶಿಕ್ಷಕಿಯಾಗಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಪ್ರಸ್ತುತ ಕಣಿಯೂರು ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಜಾತಾ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಪಿಲಿಗೂಡು ಧರ್ಮದರ್ಶಿ ಪದ್ಮನಾಭ ಶಿಲ್ಪಿ ಅವರು ಸಾಧಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಉದಯ ಕುಮಾರ್ ಮೇಲಾಂಟ, ಜಿತೇಶ್ ಜೈನ್, ಭಾರತಿ ಕೆ. ರಾವ್, ವಿಠಲ ಶೆಟ್ಟಿ ಕೊಲ್ಲೊಟ್ಟು, ರಂಜಿತ್ ಮಣಿಯಾಣಿ, ರವಿ ಕುಮಾರ್, ತನಿಯಪ್ಪ ಗೌಡ, ಸಂದೇಶ್ ಶೆಟ್ಟಿ, ಚಂದ್ರಕಾಂತ ರಾವ್, ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಮಲೆಂಗಲ್ಲು, ಕಾರ್ಯದರ್ಶಿ ಶರತ್ ಮೂರ್ಜಾಲು, ಪ್ರಶಾಂತ್ ಜೈನ್ ಅಡೆಂಜ, ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅಡೆಂಜ, ಪ್ರಶಾಂತ್ ಗೌಡ ಉರುಂಬುತ್ತಿಮಾರು, ಕೋಶಾಧಿಕಾರಿ ಕೃಷ್ಣ ನಾಯ್ಕ ವಳಬಾವು, ಕ್ರೀಡಾ ಸಂಚಾಲಕ ಸುನಿಲ್ ಮದಕ, ಯಶವಂತ ಬೊಳ್ಳರಮಜಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಹಾಗೂ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *