ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಪೂಂಜ ಯಕ್ಷಮಿತ್ರ ಸಂಘಟನೆಯ ವತಿಯಿಂದ ಸಿದ್ಧಕಟ್ಟೆಯ ಫಲ್ಗುಣಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಭಾನುವಾರ ನಡೆಯಿತು.

ಹಿರಿಯ ಯಕ್ಷಗಾನ ಸಂಘಟಕ ಪಿ. ಮಂಜಪ್ಪ ಅರಳ ಅವರಿಗೆ ‘ಸಿದ್ಧಕಟ್ಟೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಿದ್ಧಕಟ್ಟೆ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ಕೊಯಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ದಿಕ್ಸೂಚಿ ಭಾಷಣ ಮಾಡಿದರು.

ಪ್ರದೀಪ್ ಭಟ್ ಮಾದೇರಿ, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ ಹಾಗೂ ಬೇಬಿ ಶೆಟ್ಟಿ ಕಲಾಯಿದಡ್ಡ ಶುಭ ಹಾರೈಸಿದರು. ಸಮಿತಿ ಸಂಚಾಲಕ ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ, ಸಂಘಟಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ವಲಯ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಜಿಲ್ಲೆಯ ಆಯ್ದ ಕಲಾವಿದರಿಂದ ‘ಸುಧನ್ವಾರ್ಜುನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ವಕೀಲ ಸುರೇಶ್ ಶೆಟ್ಟಿ ಸಿದ್ಧಕಟ್ಟೆ ಸ್ವಾಗತಿಸಿ, ಪಿಡಿಒ ಗಣೇಶ ಶೆಟ್ಟಿ ವಂದಿಸಿದರು. ಉಮೇಶ್ ಶೆಟ್ಟಿ ಪಾಲ್ಯ ಕಾರ್ಯಕ್ರಮ ನಿರೂಪಿಸಿದರು.


