ಮಾಣಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನೇರಳಕಟ್ಟೆಯ ಶ್ರೀ ಗಣೇಶ ಸಭಾಭವನ ಶಾಖೆಯಲ್ಲಿ ವಿಶೇಷ ಅಮೃತ ಫಲಹಾರ ತರಗತಿ ನಡೆಯಿತು.

ಉಪನ್ಯಾಸಕ ಪ್ರಕಾಶ್ ನಾಯಕ್ ಅವರು ತರಗತಿ ನಡೆಸಿಕೊಟ್ಟು, ಕ್ಯಾರೆಟ್, ಬೀಟ್ರೋಟ್, ಕುಂಬಳಕಾಯಿ, ಹಾಗಲಕಾಯಿ, ಮೂಲಂಗಿ ಹಾಗೂ ಮುಳ್ಳುಸೌತೆ ಸೇರಿದಂತೆ ಹಸಿರು ತರಕಾರಿಗಳಲ್ಲಿರುವ ಪೋಷಕಾಂಶಗಳು ಹಾಗೂ ಅವುಗಳ ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ವೀಳ್ಯದೆಲೆ, ಏಲಕ್ಕಿ, ಬೆಲ್ಲ ಹಾಗೂ ತೆಂಗಿನ ಹಾಲಿನಿಂದ ತಯಾರಿಸುವ ವಿಶೇಷ ಪಾನೀಯದ ತಯಾರಿ ಮತ್ತು ಉಪಯೋಗದ ಬಗ್ಗೆ ವಿವರಿಸಿ, ಯೋಗಬಂಧುಗಳಿಗೆ ವಿತರಿಸಲಾಯಿತು.
ಯೋಗದ ಜೊತೆಗೆ ಸಾತ್ವಿಕ ಆಹಾರ ಪದ್ಧತಿಯ ಮಹತ್ವದ ಕುರಿತು ವಿಶೇಷ ತರಗತಿ ನಡೆಸಲಾಗುತ್ತಿದ್ದು, ನಾಲ್ಕು ಆದಿತ್ಯವಾರಗಳಲ್ಲಿ ಒಣಹಣ್ಣು, ಮೊಳಕೆ ಕಾಳು ಹಾಗೂ ತಾಜಾ ಹಣ್ಣುಗಳ ಸೇವನೆಯ ಮಹತ್ವವನ್ನು ತಿಳಿಸಲಾಗುತ್ತಿದೆ.

ಯೋಗೀಶ್ ಪುತ್ತೂರು, ಕೀರ್ತಿ ವಿಟ್ಲ ಹಾಗೂ ಚಿತ್ತರಂಜನ್ ನೆಕ್ಕಿಲಾರು ಪೋಷಕಾಂಶಗಳ ಉಪಯೋಗದ ಕುರಿತು ಮಾಹಿತಿ ನೀಡಿದರು.
ಭಜನೆ, ಅಮೃತವಚನ ಹಾಗೂ ಪಂಚಾಂಗ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಕೊನೆಯಲ್ಲಿ ಅನ್ನಪೂರ್ಣ ಮಂತ್ರದೊಂದಿಗೆ ಪ್ರಸಾದ ವಿತರಿಸಲಾಯಿತು.

ಮುಖ್ಯ ಶಿಕ್ಷಕ ಪ್ರಕಾಶ್ ಅಣ್ಣಡ್ಕ ಅವರ ನಿರ್ದೇಶನದಲ್ಲಿ ಹಾಗೂ ಶಿಕ್ಷಕಿ ವೃಂದಾ ಜೆ. ರೈ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು.


