Breaking
20 Jul 2026, Mon

ನಾಗಲ್ಯಾಂಡ್ನಲ್ಲಿ ಭೀಕರ ಭೂಕುಸಿತ: ಮಕ್ಕಳು ಸೇರಿ 8 ಮಂದಿ ಸಾವು ಶಂಕೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಕೊಹಿಮಾ: ನಾಗಾಲ್ಯಾಂಡ್ನ ಮಾನ್ ಜಿಲ್ಲೆಯಲ್ಲಿ ಭಾರೀ ಮಳೆಯ ನಡುವೆಯೇ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರವಿವಾರ (ಜು.19) ನಡೆದ ಈ ದುರಂತದ ಬಳಿಕ ಹಠಾತ್ ಪ್ರವಾಹವೂ ಉಂಟಾಗಿದ್ದು, ಇದುವರೆಗೆ ನಾಲ್ಕು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.


ಮಾನ್ ಜಿಲ್ಲೆಯ ಉಪ ಆಯುಕ್ತ ವೆನ್ನೈ ಕೊನ್ಯಾಕ್ ಮಾಹಿತಿ ನೀಡಿ, “ಒಟ್ಟು ಎಂಟು ಮಂದಿ ಸಾವನ್ನಪ್ಪಿರುವ ಶಂಕೆಯಿದ್ದು, ನಾಲ್ಕು ಶವಗಳನ್ನು ಪತ್ತೆಹಚ್ಚಲಾಗಿದೆ. ಉಳಿದವರಿಗಾಗಿ ಬೃಹತ್ ಮಟ್ಟದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.


ಭೂಕುಸಿತದ ಪರಿಣಾಮ ಹಲವಾರು ಮನೆಗಳು ಮಣ್ಣಿನಡಿ ಹೂತುಹೋಗಿದ್ದು, ಅನೇಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಿರಂತರವಾಗಿ ನೀರಿನ ಹರಿವು ಹೆಚ್ಚುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಘಟನಾ ಸ್ಥಳದಲ್ಲಿ ಸ್ವಯಂಸೇವಕರು, ಪೊಲೀಸರು, ಸೇನಾ ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.


ಈ ದುರಂತಕ್ಕೆ ನಾಗಾಲ್ಯಾಂಡ್ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.


ಮಾನ್ ಜಿಲ್ಲೆಯಷ್ಟೇ ಅಲ್ಲದೆ ಮೊಕೊಕ್ಚುಂಗ್ ಜಿಲ್ಲೆಯ ತುಲಿ ಉಪವಿಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕುಸಿತ, ಹಠಾತ್ ಪ್ರವಾಹ, ರಸ್ತೆ ಸಂಪರ್ಕ ಕಡಿತ ಹಾಗೂ ಸಾರ್ವಜನಿಕ ಮೂಲಸೌಕರ್ಯ ಮತ್ತು ಖಾಸಗಿ ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *