ಉಳ್ಳಾಲ: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ಸೋಮೇಶ್ವರ ಬಸ್ ತಂಗುದಾಣದ ಸಮೀಪ ನಡೆದಿದೆ.
ಸೋಮೇಶ್ವರ ಬಸ್ ತಂಗುದಾಣದ ಬಳಿಯ ನಿವಾಸಿ ಶಾಂತಿ ಅವರ ಪುತ್ರಿ ಸಮನ್ವಿ (16) ಮೃತ ವಿದ್ಯಾರ್ಥಿನಿ. ಆಕೆ ಸೋಮೇಶ್ವರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಭಾನುವಾರ ಸಂಜೆ ತಾಯಿ ಹಾಗೂ ಹಿರಿಯ ಸಹೋದರಿ ಮನೆಯಲ್ಲಿದ್ದ ವೇಳೆ ಸಮನ್ವಿ ಸ್ನಾನಕ್ಕೆಂದು ಕೋಣೆಗೆ ತೆರಳಿದ್ದಳು. ಬಹಳ ಸಮಯವಾದರೂ ಹೊರಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬದವರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ, ಸಮನ್ವಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗದ ಕಾರಣ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಮನ್ವಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾಳೆ.






