ಸುಳ್ಯ: ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ಮುರಿದು ಮನೆಯ ಅಂಗಳಕ್ಕೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪೈಚಾರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಾಫಿ ಪ್ರಗತಿ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಶಾಫಿ ಅವರ ಹಿರಿಯ ಸಹೋದರ ಹಸೈನಾರ್ ಅವರು ಮನೆಯ ಮೇಲ್ಛಾವಣಿಯಿಂದ ಇಳಿಯುತ್ತಿದ್ದ ಮಳೆನೀರನ್ನು ಬಕೆಟ್ನಲ್ಲಿ ಸಂಗ್ರಹಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ ಇದ್ದಕ್ಕಿದ್ದಂತೆ ಮುರಿದು ಅಂಗಳಕ್ಕೆ ಬೀಳುತ್ತಿದ್ದುದನ್ನು ಗಮನಿಸಿದ ಹಸೈನಾರ್ ಅವರು ತಕ್ಷಣ ಅಲ್ಲಿಂದ ಸರಿದು ಅಪಾಯದಿಂದ ಪಾರಾಗಿದ್ದಾರೆ. ಮರ ಬೀಳುವ ಕೆಲವೇ ಕ್ಷಣಗಳ ಮೊದಲು ಶಾಫಿ ಅವರ ತಾಯಿ ಕೂಡ ಅದೇ ಸ್ಥಳದಲ್ಲಿ ನಿಂತಿದ್ದರು ಎನ್ನಲಾಗಿದೆ.
ಘಟನೆಯ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.







