Breaking
29 May 2026, Fri

ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ ಮಾಲಿಕೆ 69 – ಅಸ್ಪೃಶ್ಯತೆ, ಅಂಧಶ್ರದ್ಧೆಯ ವಿರುದ್ಧದ ತ್ರಿವಿಧ ಕ್ರಾಂತಿ ಇಂದಿಗೂ ಪ್ರಸ್ತುತ: ದಿನೇಶ್ ಸುವರ್ಣ ರಾಯಿ

ಕಲ್ಲಡ್ಕ: “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂಬ ಸಂದೇಶದ ಮೂಲಕ ಸಂಸ್ಕಾರಯುತ ಶಿಕ್ಷಣ ಹಾಗೂ ಸಂಘಟಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದು ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಭಿಪ್ರಾಯಪಟ್ಟರು.

ಅವರು ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ಅವರ ಪೂರ್ಲಿಪಾಡಿಯ ಸಮೃದ್ಧಿ ನಿವಾಸದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ‘ಗುರುತತ್ವವಾಹಿನಿ ಭಜನಾ ಸಂಕೀರ್ತನೆ ಮಾಲಿಕೆ 69’ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡುತ್ತಾ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸಮಾನತೆ ಹಾಗೂ ಶೈಕ್ಷಣಿಕ ಪ್ರಗತಿಯ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದ ಮಹಾನ್ ಸಮಾಜ ಸುಧಾರಕರಾಗಿದ್ದರು. “ಜಾತಿ ಒಂದೇ, ಮತ ಒಂದೇ, ದೇವರು ಒಬ್ಬನೇ” ಎಂಬ ಮಾನವತಾವಾದಿ ಸಂದೇಶದ ಮೂಲಕ ಅವರು ಸಮಾನತೆಯ ಸಮಾಜದ ಕನಸನ್ನು ಬಿತ್ತಿದರು. ಅಸ್ಪೃಶ್ಯತೆ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಅವರು ನಡೆಸಿದ ತ್ರಿವಿಧ ಕ್ರಾಂತಿಯು ಇಂದಿಗೂ ಸಮಾಜದ ಏಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವೀರಕಂಬ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಪ್ರಮುಖರಾದ ಯಾದವ ಸಾಲಿಯಾನ್, ದಯಾನಂದ ಸಾಲಿಯಾನ್, ಜಯಪ್ರಕಾಶ್ ತೆಕ್ಕಿಪಾಡು, ಕಿಶೋರ್ ಕುಮಾರ್ ಕಟ್ಟೆಮಾರು, ಕಲ್ಲಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ರಮೇಶ್ ಹೊಸಕಟ್ಟ ಮೊದಲಾದವರು ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್ ಪೂಂಜರಕೋಡಿ, ನಿಕೇಶ್ ಕೋಟ್ಯಾನ್, ನಿರ್ದೇಶಕರಾದ ಯಶೋಧರ ಕಡಂಬಳಿಕೆ, ಮಹೇಶ್ ಬೊಳ್ಳಾಯಿ, ಚಿನ್ನಾ ಕಲ್ಲಡ್ಕ, ಸದಸ್ಯರಾದ ಸತೀಶ್ ಬಾಯಿಲ, ಸುದೀಪ್ ಸಾಲಿಯಾನ್, ಜಗದೀಶ್ ಕಲ್ಲಡ್ಕ, ಭವಾನಿ ಅಮೀನ್, ಸುನೀತಾ ಮಾರ್ನಬೈಲು, ಯತೀಶ್ ಬೊಳ್ಳಾಯಿ ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಅರುಣ್ ಕುಮಾರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಚಂದ್ರಶೇಖರ್ ಸಾಲಿಯಾನ್ ಕುಟುಂಬಸ್ಥರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ ಮತ್ತು ಕಾರ್ತಿಕ್ ದೇರಾಜೆ ಸಂಗೀತ ಸೇವೆ ನೀಡಿದರು.

ಆತಿಥ್ಯ ವಹಿಸಿದ್ದ ಚಂದ್ರಶೇಖರ್ ಸಾಲಿಯಾನ್ ದಂಪತಿಗಳು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲಿಯಾನ್ ಅಜೆಕಳ ವಂದಿಸಿದರು. ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *