Breaking
7 May 2026, Thu

ಬಂಟ್ವಾಳ: ‘ಮಹಿಳಾ ಮೀಸಲಾತಿಗೆ ಬಿಜೆಪಿ ಇಬ್ಬಗೆ ನೀತಿ’ ಕಾಂಗ್ರೆಸ್ ಪ್ರಚಾರ ಸಮಿತಿ ಲೇವಡಿ

ಬಂಟ್ವಾಳ: ದೇಶದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ ಎಂದು ಆರೋಪಿಸಿ ಮಹಿಳೆಯರಲ್ಲಿ ಕ್ಷಮೆಯಾಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ನಡೆದಿರುವ ಅಪ್ರಾಪ್ತ ಯುವತಿಯ ಅತ್ಯಾಚಾರ ಸಹಿತ ಗುಜರಾತಿನಲ್ಲಿ ನಡೆದ ಗಭರ್ಿಣಿ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಮಣಿಪುರದಲ್ಲಿ ನಡೆದಿರುವ ಮಹಿಳೆಯರು ಮತ್ತು ಮಕ್ಕಳ ಹತ್ಯೆ ಬಗ್ಗೆ ಮೌನ ತಾಳುವ ಮೂಲಕ ಬಿಜೆಪಿ ಇಬ್ಬಗೆ ನೀತಿ ಜನತೆಗೆ ಚೆನ್ನಾಗಿ ತಿಳಿದಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಹಮ್ಮದ್ ಆಲಿ ಪುತ್ತೂರು ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಭೇಟಿ ಬಚಾವೋ, ಭೇಟಿ ಪಡಾವೋ’ ಘೋಷಣೆ ಕೂಗುವ ಬಿಜೆಪಿ ಆಡಳಿತ ಹೊಂದಿರುವ ಯಾವ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ…?’ ಎಂದು ಅವರು ಪ್ರಶ್ನಿಸಿದರು.

ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕ ಕುಲ್ ದೀಪ್ ಸಿಂಗ್ ಶೆಂಗಾರ್ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ನಡೆಸಿದ್ದು, ಆಕೆಯ ತಂದೆಯನ್ನು ಪೊಲೀಸ್ ಕಸ್ಟಡಿಯಲ್ಲೇ ಹತ್ಯೆ ನಡೆಸಲಾಗಿದೆ. ಸಾಕ್ಷ್ಯ ನಾಶಗೊಳಿಸಲು ಸಂತ್ರಸ್ತೆ ಕಾರಿಗೆ ಟ್ರಕ್ ಡಿಕ್ಕಿ ಹೊಡೆಸಲಾಗಿದೆ. ಗುಜರಾತಿನಲ್ಲಿ ಗರ್ಭಿಣಿ ಮೇಲಿನ ಸಾಮೂಹಿಕ ಅತ್ಯಾಕಾರಕ್ಕೆ ಸಂಬಂಧಿಸಿದಂತೆ ಬಲ್ಕಿಸ್ ಬಾನು ಪ್ರಕರಣದಲ್ಲಿ ಸಂತ್ರಸ್ಥೆ ಕಣ್ಣೆದುರಲ್ಲೇ ಎಳೆ ಮಗುವನ್ನು ಕಲ್ಲಿನಿಂದ ಚಚ್ಚಿ ಕೊಂದ 11 ಮಂದಿ ಆರೋಪಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದು ಯಾರು… ಎಂದು ಅವರು ಪ್ರಶ್ನಿಸಿದರು. ಉತ್ತರಪ್ರದೇಶದ ಅತ್ರಾಸ್ ನಲ್ಲಿ ದಲಿತ ಹಣ್ಣಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಂಸತ್ರಸ್ಥೆಯನ್ನು ಸ್ವತಃ ಪೊಲೀಸರೇ ಪೆಟ್ರೋಲ್ ಸುರಿದು ಸಾಕ್ಷ್ಯ ನಾಶಗೊಳಿಸಿದ್ದು, ಸಂಸದ ಬ್ರಿಜ್ ಭೂಷಣ್ ಸಿಂಗಜವರು ನಡೆಸಿದ್ದ ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಸಂತ್ರಸ್ಥೆಯರನ್ನು ಪೊಲೀಸರಿಂದ ಎಳೆದಾಡಿಸಿದ್ದು ಯಾರು…? ಎಂದು ಅವರು ಪ್ರಶ್ನಿಸಿದ್ದಾರೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ, ಇಬ್ಬರು ಮಹಿಳೆಯರು ಮತ್ತು ಒಂದು ಮಗುವನ್ನು ಆಂಬುಲೆನ್ಸ್ ನಲ್ಲಿ ಜೀವಂತ ಸುಟ್ಟು ಹಾಕಿರುವುದು, ಇಂಫಾಲ್ ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವು, ಹಣದುಬ್ಬರ ಮತ್ತು ಅಡುಗೆ ಅನಿಲ ಕೊರತೆಯಿಂದ ಕಂಗೆಟ್ಟಿರುವ ಮಹಿಳೆಯರ ಬಗ್ಗೆ ಪ್ರಧಾನಿ ಅವರು ಏಕೆ ಮೌನ ತಾಳಿದ್ದಾರೆ…? ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಪ್ರಥಮ ಬಾರಿಗೆ ದೇಶದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೊಳಿಸಲು ಮುಂದಾದ ವೇಳೆ ಬಿಜೆಪಿ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕರಷ್ಣ ಅಡ್ವಾಣಿ, ಯಶವಂತ ಸಿನ್ಹ, ರಾಮ್ ಜೇಠ್ಮಲಾನಿ ಮತ್ತಿತರರು ವಿರೋಧ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಕಳೆದ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ನಾರಿ ಶಕ್ತಿ ವಂದನ್’ ಮಹಿಳಾ ಮೀಸಲಾತಿ ಕಾಯ್ದೆ ಮಂಡಿಸಿದಾಗಿ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿರುವುದನ್ನು ಅವರು ನೆನಪಿಸಬೇಕು ಎಂದರು.

ಇದೀಗ ಮಹಿಳಾ ಮೀಸಲಾತಿ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿರುವುದಕ್ಕೆ ಮಾತ್ರ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ವರದಕ್ಷಿಣೆ ನಿಷೇಧ ಮತ್ತು ಮಹಿಳಾ ದೌರ್ಜನ್ಯ ವಿರುದ್ಧ ಕಾಯ್ದೆ ರೂಪಿಸಿರುವ ಕಾಂಗ್ರೆಸ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿಗಳನ್ನು ತೆರೆದು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿದೆ. ಜಿಲ್ಲೆಯಲ್ಲಿ ಮಮತಾ ಎಸ್.ಗಟ್ಟಿ, ಶಾಲೆಟ್ ಪಿಂಟೋ, ಕೃಪಾ ಆಳ್ವ, ದಿವ್ಯಪ್ರಭಾ, ಪ್ರತಿಭಾ ಕುಳಾಯಿ, ಲಾವಣ್ಯ ಬಲ್ಲಾಳ್ ಇವರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಕಾಂಗ್ರೆಸ್ ಅವಕಾಶ ನೀಡಿದೆ.

ಆದರೆ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಟೀಕಿಸುತ್ತಿರುವ ಮಹಿಳಾ ವಿರೋಧಿ ಬಿಜೆಪಿಗರು ಜಿಲ್ಲೆಯಲ್ಲಿ ಎಷ್ಟು ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ್ದಾರೆ ಎಂದರು ಅವರು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ಲಾದ್ರು ಮಿನೇಜಸ್ ಮತ್ತು ಎ.ಬಿ.ಅಬ್ದುಲ್ಲ ಕೊಳ್ನಾಡು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *