ಕುಂದಾಪುರ: ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಲ್ಲೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಕಾಲೋನಿ ನಿವಾಸಿ ಶಶಿಕಲಾ (20) ಎಂದು ಗುರುತಿಸಲಾಗಿದೆ.

ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಶಶಿಕಲಾ ಅವರು ಕಳೆದ ಒಂದು ವರ್ಷದಿಂದ ಮಂಜುನಾಥ (19) ಎಂಬಾತನನ್ನು ಪ್ರೀತಿಸುತ್ತಿದ್ದರು. ಆರೋಪಿ ಮಂಜುನಾಥ ಶಶಿಕಲಾ ಅವರ ಬಳಿ ನಿರಂತರವಾಗಿ ಹಣಕ್ಕಾಗಿ ಪೀಡಿಸುತ್ತಿದ್ದು, “ಹಣ ನೀಡಲು ಆಗದಿದ್ದರೆ ನೀನು ನನಗೆ ಬೇಡ, ಎಲ್ಲಿಯಾದರೂ ಹೋಗಿ ಸತ್ತುಬಿಡು” ಎಂದು ಹೇಳುತ್ತಿದ್ದನೆಂದು ತಿಳಿದುಬಂದಿದೆ.

ಏ. 3ರಂದು ಶಶಿಕಲಾ ಕಾಣೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದ ವೇಳೆ ಅದೇ ದಿನ ರಾತ್ರಿ ಮನೆಯ ಸಮೀಪದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಮಂಜುನಾಥನ ನಿಷ್ಠುರ ಮಾತು ಹಾಗೂ ಪ್ರಚೋದನೆಯಿಂದಲೇ ಶಶಿಕಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ವಿರುದ್ಧ ಪ್ರಕರಣ ದಾಖಲಾಗಿದೆ.


