ಉಡುಪಿ: ಮಾಳ ಮುಳ್ಳೂರು ಪ್ರದೇಶದಲ್ಲಿ ಸ್ಕೂಟರ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ. 24 ರಂದು ನಡೆದಿದೆ.

ಮೃತರನ್ನು ಬಜಗೋಳಿ ನಿವಾಸಿ ನವೀನ್ (45) ಎಂದು ಗುರುತಿಸಲಾಗಿದೆ. ಅವರು ವೆಲ್ಡಿಂಗ್ ಕೆಲಸದ ಜೊತೆಗೆ ಹಾವು ಹಿಡಿಯುವ ಕಾರ್ಯವನ್ನೂ ಮಾಡುತ್ತಿದ್ದರು.

ಮಾ. 24 ರಂದು ಹಾವನ್ನು ಹಿಡಿದು ಕಾಡಿಗೆ ಬಿಡಲು ತೆರಳುತ್ತಿದ್ದ ವೇಳೆ ಮಾಳ ಮುಳ್ಳೂರಿನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





