ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಳೆದ 6 ವರ್ಷಗಳಿಂದ ರೈತರಿಗೆ ಬೇಕಾದ ಸಾಲ ಸೌಲಭ್ಯವನ್ನು ಯಾವುದೇ ತಾರತಮ್ಯವಿಲ್ಲದೆ ಸಂಘದ ವತಿಯಿಂದ ಅತೀ ಸುಲಭವಾಗಿ ನೀಡಲಾಗಿದ್ದು ಅಲ್ಲದೇ ಸಂಘದ ವತಿಯಿಂದ ವಿವಿಧ ರೀತಿಯಲ್ಲಿ ಸಮಾಜ ಸೇವೆಯೊಂದಿಗೆ ಆರೋಗ್ಯ, ಶಿಕ್ಷಣ, ಸೇರಿದಂತೆ ಇನ್ನಿತರ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡಿ, ಎಲ್ಲಾ ಕ್ಷೇತ್ರಗಳಲ್ಲೂ ಸಿದ್ದಕಟ್ಟೆ ಸಹಕಾರ ಸಂಘವು ಗಣನೀಯವಾಗಿ ತೊಡಗಿಸಿ ಕೊಂಡಿರುವುದರ ಫಲವಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಗುರುತಿಸಿ ಕನ್ನಡ ಪ್ರಭ ಮತ್ತು ಏಷಿಯ ನೆಟ್ ಸುವರ್ಣ ನ್ಯೂಸ್ ಬಳಗವು ಕರ್ನಾಟಕ ಸಹಕಾರ ಶಿರೋಮಣಿ 2025 ರಾಜ್ಯ ಮಟ್ಟದ ಪ್ರಶಸ್ತಿ ನೀಡಿರುವುದು ಸಿದ್ದಕಟ್ಟೆ ಸಹಕಾರ ಸಂಘಕ್ಕೆ ಸಿಕ್ಕಿದ ಗೌರವವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೂಡುಂಬ ಅಭಿಪ್ರಾಯ ಪಟ್ಟರು.

ಅವರು ಇಂದು ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭುರ ಅವರಿಗೆ ಸಂಘದ ವತಿಯಿಂದ ಏರ್ಪಡಿಸಿದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ನಿರ್ದೇಶಕರಾದ ರಶ್ಮಿತ್ ಶೆಟ್ಟಿ ನೋಣಲ್ ಗುತ್ತು, ದಿನೇಶ್ ಪೂಜಾರಿ ಹುಲಿಮೇರು ಅಭಿನಂದನಾ ಮಾತುಗಳಾನ್ನಾಡಿ ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸತೀಶ್ ಪೂಜಾರಿ ಅಲಕ್ಕೆ,ಚಂದ್ರಶೇಖರ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ ಹೆಗ್ಡೆ, ಮಂದಾರತಿ ಶೆಟ್ಟಿ, ಪುಷ್ಪಲತಾ ಎಸ್. ಆರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು, ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ ಧನ್ಯವಾದವಿತ್ತರು.








