ಬಂಟ್ವಾಳ: ನೀರು ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಳೆದು ಪರಾರಿಯಾದ ಘಟನೆ ಫೆ. 1 ರಂದು ವಗ್ಗ ಸಮೀಪದ ಕಾವಳಪಡೂರು ಗ್ರಾಮದಲ್ಲಿ ನಡೆದಿದೆ.

ರಾಜಪಲ್ಕೆಯಲ್ಲಿರುವ ಉಪಾಲಕ್ಷ್ಮಿ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಜಗುಲಿಯಲ್ಲಿ ಕುಳಿತು ಕುಡಿಯಲು ನೀರು ಕೇಳಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಹಿಳೆ ಸ್ವತಃ ನೀರು ತರಲೆಂದು ಮನೆಯೊಳಗೆ ಹೋದ ವೇಳೆ ಆರೋಪಿ ಆಕೆಯ ಹಿಂದೆಯೇ ಓಳಗೆ ನುಗ್ಗಿ ಮಹಿಳೆಯನ್ನು ಹಿಡಿದು, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಕುತ್ತಿಗೆಯಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ ಎರಡುವರೆ ಪವನ್ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾನೆ.

ಘಟನೆ ನಡೆಯುವ ಕೆಲವೇ ಸಮಯದ ಹಿಂದೆ ಮಹಿಳೆಯ ಗಂಡ ಪೇಟೆಯ ಕಡೆಗೆ ತೆರಳಿದ್ದು ಇವರ ಮಗ ವಗ್ಗದಲ್ಲಿ ನಡೆಯುತ್ತಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು ಎನ್ನಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




