ಬಂಟ್ವಾಳ: ವಾಮದಪದವು ಸಮೀಪದ ಚೆನ್ನೈತ್ತೋಡಿ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಜ. 18 ರಂದು ಸಂಜೆ ಹಿಂದೂ ಸಂಗಮ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಗತ್ತಿಗೆ ಮಾರ್ಗದರ್ಶನ ನೀಡಲು ನೈತಿಕತೆ ಮತ್ತು ಅರ್ಹತೆ ಹೊಂದಿರುವ ಭಾರತೀಯರು ಎಂದಿಗೂ ಕ್ರಾಂತಿ ಬಯಸದೆ ಎಲ್ಲರಿಗೂ ಶಾಂತಿ ಮತ್ತು ಒಳಿತು ಬಯಸುವ ಜೀವನ ಪದ್ಧತಿ ಇತರರಿಗೂ ಮಾದರಿಯಾಗಿದೆ ಎಂದು ಆರ್ ಎಸ್ ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಹೇಳಿದ್ದಾರೆ. ಇಲ್ಲಿನ ಕುಟುಂಬ ಪದ್ಧತಿ ಮತ್ತು ಸಂಸ್ಕೃತಿ ವಿರುದ್ಧ ಅನೇಕ ಬಾರಿ ಮತಾಂಧರು ದಾಳಿ ನಡೆಸಿದ್ದರೂ ಇಲ್ಲಿನ ಜೀವನ ಪದ್ಧತಿ ಸೇರಿದಂತೆ ಸ್ವದೇಶಿ ಮತ್ತು ಸಾಮಾಜಿಕ ಸಾಮರಸ್ಯದ ಹಿಂದುತ್ವ ಗಟ್ಟಿಯಾಗಿ ಉಳಿದಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.

ಮೂಡುಬಿದ್ರೆ ಕರಿಂಜೆ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ‘ದೇಶದಲ್ಲಿ ಜಾತಿ ವ್ಯವಸ್ಥೆಗೆ ಬದಲಾಗಿ ದೇಶಭಕ್ತಿಗೆ ಪೂರಕವಾಗಿ ಹಿಂದುತ್ವ ಗಟ್ಟಿಯಾಗಬೇಕು’ ಎಂದರು. ಯೋಗ ಶಿಕ್ಷಕಿ ಶಶಿಕಲಾ ಬಜಿರೆ ಮಾತನಾಡಿ, ‘ ಯೋಗ ಮತ್ತು ಸೇವೆ ಬಗ್ಗೆ ಮಾಹಿತಿ’ ನೀಡಿದರು. ಆರಂಭದಲ್ಲಿ ಇರ್ವತ್ತೂರು ಪದವಿನಿಂದ ಆಕರ್ಷಕ ಶೋಭಯಾತ್ರೆ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ, ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಿಳಾ ಸಂಯೋಜಕಿ ಸುಲೋಚನಾ ಜಿ. ಕೆ. ಭಟ್ ಸ್ವಾಗತಿಸಿ, ಪುರುಷೋತ್ತಮ ಶೆಟ್ಟಿ ವಂದಿಸಿದರು. ನಾಗರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



