ಬಂಟ್ವಾಳ: ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಿನ್ಯಾರ್ನಲ್ಲಿ ಬೇಲಿಗೆ ಅಳವಡಿಸಿದ್ದ ಕಬ್ಬಿಣದ ತಂತಿಗೆ ಸಿಲುಕಿದ್ದ ಚಿರತೆಯನ್ನು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ರಕ್ಷಿಸಿದ ಘಟನೆ ನಡೆದಿದೆ.

ಒಂದೂವರೆ ವರ್ಷದ ಹೆಣ್ಣು ಚಿರತೆ ರಕ್ಷಣಾತ್ಮಕ ಬೇಲಿಗೆ ಅಳವಡಿಸಿದ್ದ ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪಿಲಿಕುಳ ಪಶುವೈದ್ಯಾಧಿಕಾರಿ ಯಶಸ್ವಿ ನಾರಾವಿ ಚಿರತೆಗೆ ನಿದ್ರಾಜನಕ ಔಷಧಿ ನೀಡಿ ಬಳಿಕ ಪ್ರಾಣಿಯನ್ನು ಎಚ್ಚರಿಕೆಯಿಂದ ತಂತಿಯಿಂದ ಮುಕ್ತಗೊಳಿಸಿ, ಸುರಕ್ಷಿತವಾಗಿ ಪಂಜರದಲ್ಲಿ ಇರಿಸಿ, ವೇಣೂರು ಅರಣ್ಯ ಇಲಾಖೆ ಆವರಣಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.




