ಉಡುಪಿ: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ನೂರಾರು ಮರಗಳು ಆಹುತಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀಲಾವರ ಮಟಪಾಡಿ ರಸ್ತೆಯ ಜೆನಿತ್ ಡೈ ಮೇಕರ್ಸ್ ಹಿಂಭಾಗದಲ್ಲಿ ಜ.8 ರಂದು ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಹತ್ತಾರು ಎಕ್ರೆಯಲಿದ್ದ ಮಾವು, ಹಲಸು, ಪರಂಗಿ , ತೆಂಗು, ಅಡಿಕೆ ತೋಟ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬೆಂಕಿ ಬಿದ್ದಿರುವ ಮಾಹಿತಿ ತಿಳಿದ ತಕ್ಷಣ ನೀಲಾವರ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್ ನೀಲಾವರ, ಜೆನಿತ್ ಡೈ ಮೇಕರ್ಸ್ ಸಿಬ್ಬಂದಿಗಳು , ಸ್ಥಳೀಯರಾದ ಸಿದ್ಧಾರ್ಥ್ ಇನ್ನಿತರರು ಸೇರಿ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ, ತಾವು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.

ಈ ಮೂಲಕ ಅಕ್ಕ ಪಕ್ಕದ ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಬೆಂಕಿ ಹರಡುವ ಭಾರೀ ಅನಾಹುತವೊಂದು ತಪ್ಪಿಸಿದ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್ ನೀಲಾವರ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.




