ಬಂಟ್ವಾಳ: ಇಂದಿನ ಮಕ್ಕಳಿಗೆ ಕಲಿಕೆಗೆ ಹಲವು ಅವಕಾಶಗಳಿವೆ. ಶಿಸ್ತಿನಿಂದ ಆಸಕ್ತಿಯೊಂದಿಗೆ ಗುರಿಯೆಡೆಗೆ ಗಮನವಿಟ್ಟು, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತರಾದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಎಮ್ಆರ್ಪಿಎಲ್ ನ ಪ್ಲಾನಿಂಗ್ ಮತ್ತು ಕ್ವಾಲಿಟಿಯ ಚೀಫ್ ಜನರಲ್ ಮ್ಯಾನೇಜರ್ ಸುಧೀರ್ ಪೈ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ 93ನೇ ವರ್ಧಂತ್ಸುವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ ಮಾತನಾಡಿ, ವಿದ್ಯಾಸಂಸ್ಥೆಯು ಶತಮಾನಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದಂತಹ ಎಲ್ಲಾ ವ್ಯವಸ್ಥೆಗಳು ಇವೆ ಎಂದರು.
ವಿದ್ಯಾ ಸಂಸ್ಥೆಯ ಸಂಚಾಲಕರಾದ ಬಿ.ಸುರೇಶ್ ಬಾಳಿಗ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಶಿಕ್ಷಣದಲ್ಲಿ ಗುರಿಯನ್ನು ಸಾಧಿಸಬೇಕು. ನಿಮಗೆ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡಲಾಗುವುದು ಎಂದರು.

ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಕಛೇರಿ ಬಂಟ್ವಾಳದ ಸಮನ್ವಯ ಅಧಿಕಾರಿ ಸುರೇಖಾ ಯಳವಾರ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಸಂಚಾಲಕರು ದ್ವಜಾರೋಹಣವನ್ನು ನೆರವೇರಿಸಿದರು.
ಸಹ ಶಿಕ್ಷಕ ಪ್ರಶಾಂತ್ ಎನ್. ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ಸುರೇಖಾ ಕೆ. ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು, ಸಹ ಶಿಕ್ಷಕ ದಾಮೋದರ ಪಡಿಯಾರ ಕೆ. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.



