ಉಡುಪಿ: ಮನೆಯ ಬೀಗ ಮುರಿದು ನಗದು ಮತ್ತು ಚಿನ್ನಾಭರಣ ಕಳುವಾದ ಘಟನೆ ಕಟಪಾಡಿ ಕೋಟೆ ಗ್ರಾಮದ ಕಿನ್ನಿಗುಡ್ಡೆಯಲ್ಲಿ ನಡೆದಿದೆ.
ನ.26 ರಂದು ಕಿನ್ನಿಗುಡ್ಡೆಯ ದೀಪ ಜ್ಯೋತಿ ಮನೆಯ ಪ್ರಭಾಕರ ಅಮೀನ್ ಅವರು ಅಳಿಯನ ಮದುವೆಗೆಂದು ಪತ್ನಿ ಮತ್ತು ಮಗನೊಂದಿಗೆ ಮುಂಬೈಗೆ ತೆರಳಿದ್ದರು. ಡಿ. 5 ರಂದು ಮನೆಗೆ ಬಂದು ನೋಡಿದಾಗ ಮನೆ ಬಾಗಿಲಿನ ಬಳಿ ಕತ್ತಿ ಬಿದ್ದಿರುವುದು, ಮನೆ ಬಾಗಿಲು ಹಾನಿಗೊಳಗಾಗಿರುವುದು ಮತ್ತು ಅಡುಗೆಮನೆ ಬಾಗಿಲು ತೆರೆದಿರುವುದು ಗಮನಕ್ಕೆ ಬಂದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಮನೆಯಿಂದ 17,000 ರೂಪಾಯಿ ನಗದು, ಚಿನ್ನ ಸೇರಿ ಒಟ್ಟು 20,000 ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ತಿಳಿದುಬಂದಿದೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




