ಮಂಗಳೂರು : ನಗರದ ಬಿಜೈ ಸರಕಾರಿ ಬಸ್ ನಿಲ್ದಾಣದ ಎದುರಿನ ಜಂಕ್ಷನ್ನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸುತಿದ್ದವನನ್ನು ಗಮನಿಸಿದ ಸಾರ್ವಜನಿಕರು ಚಾಲಕನನ್ನು ತಡೆದು ಪಾಂಡೇಶ್ವರ ಸಂಚಾರ ಠಾಣೆಯ ಪೊಲೀಸರಿಗೆ ಒಪ್ಪಿಸಿದ ಘಟನೆ ನ.26 ರಂದು ನಡೆದಿದೆ.

ಲಾಲ್ಭಾಗ್ ಕಡೆಯಿಂದ ಮಂಗಳಾದೇವಿಗೆ ಹೋಗುತ್ತಿದ್ದ ರೂಟ್ ನಂಬರ್ 15ರ ಬಸ್ಸನ್ನು ಅದರ ಚಾಲಕ ಜಂಕ್ಷನ್ನಲ್ಲಿ ಯದ್ವಾತದ್ವಾ ಬಸ್ ನ್ನು ಚಲಾಯಿಸಿಕೊಂಡು ಓವರ್ಟೇಕ್ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಜಂಕ್ಷನ್ನಲ್ಲಿ ನಿಂತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾರೆ.

ಘಟನೆಯ ಬಳಿಕ ಸಾರ್ವಜನಿಕರು ತಕ್ಷಣ ಬಸ್ ಚಾಲಕನನ್ನು ಕೆಳಗಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪಾಂಡೇಶ್ವರ ಸಂಚಾರ ಠಾಣೆ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದು, ದಂಡ ವಿಧಿಸಿದ ಬಳಿಕ ಮಾತ್ರ ಬಸ್ಸನ್ನು ಬಿಡುಗಡೆ ಮಾಡುವಂತೆ ತಿಳಿಸಿದರು.




