ಮಂಗಳೂರು: ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನ.22 ರಂದು ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಮೂಡುಶೆಡ್ಡೆ ಜಾರದಬೆಟ್ಟು ನಿವಾಸಿ ಶಿವಪ್ರಸಾದ್ (39) ಎಂದು ಗುರುತಿಸಲಾಗಿದೆ.

ನ. 22ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ಬಟ್ಟೆಬರೆಯೊಂದಿಗೆ ಮನೆಯಿಂದ ಆಟೋದಲ್ಲಿ ಹೋಗಿದ್ದಾರೆ. ಮನೆಯವರು ಕರೆ ಮಾಡಿದಾಗ ತಾನು ಸ್ಟೇಟ್ ಬ್ಯಾಂಕ್ ಬಳಿ ಕೆಲಸಕ್ಕೆಂದು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಕೆಲ ಸಮಯದ ನಂತರ ಮತ್ತೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದೆ. ನಗರದ ವಿವಿಧೆಡೆ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಈ ಮೊದಲು ಕೂಡಾ ಶಿವಪ್ರಸಾದ್ ಇದೇ ರೀತಿ ಮನೆಯಿಂದ ಹೋಗಿದ್ದು ನಂತರ ವಾಪಸ್ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾಪತ್ತೆಯಾದ ವ್ಯಕ್ತಿ 5.1 ಅಡಿ ಎತ್ತರ, ಅರ್ಧ ತೋಳಿನ ಖಾಕಿ ಬಣ್ಣದ ಅಂಗಿ ಮತ್ತು ಬೂದು ಪ್ಯಾಂಟ್ ಧರಿಸಿದ್ದರು. ಗೋಧಿ ಮೈ ಬಣ್ಣ ಹೊಂದಿದ್ದು, ತುಳು, ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವರಾಗಿದ್ದಾರೆ.
ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವ್ಯಕ್ತಿಯ ಮಾಹಿತಿ ದೊರೆತಲ್ಲಿ ಕಾವೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.




