Breaking
23 Mar 2026, Mon

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಸಮರ್ಪಣೆಯಾಗುವ ಬೆಳ್ಳಿರಥ ಸಿದ್ಧ

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭವ್ಯವಾದ ಬೆಳ್ಳಿರಥ ಸಿದ್ಧವಾಗಿದೆ.

ನವಂಬರ್ 10 ರಂದು ಈ ರಥವನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತಿದ್ದು, ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳಿಂದ ಈ ಸಮರ್ಪಣೆ ನಡೆಯಲಿದ್ದು, ಈ ಸಂಬಂಧ ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿರುವ ಶಿಲ್ಪಕಲಾ ಕೇಂದ್ರದಲ್ಲಿ ಈ ಅದ್ಭುತ ರಥವನ್ನು ನಿರ್ಮಿಸಲಾಗಿದ್ದು, ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯು ಈ ರಥವನ್ನು ಕುಕ್ಕೆ ಕ್ಷೇತ್ರಕ್ಕೆ ಕಾಣಿಕೆಯಾಗಿ ನೀಡಿದೆ.

ಹಲವು ವಿಶೇಷತೆಗಳಿಂದ ಕೂಡಿರುವ ಈ ಬೆಳ್ಳಿರಥವನ್ನು ಸುಮಾರು 110 ಕಿಲೋ ಶುದ್ಧ ಬೆಳ್ಳಿಯನ್ನು ಉಪಯೋಗಿಸಿಕೊಂಡು ರಚಿಸಲಾಗಿದೆ. ರಥದಲ್ಲಿ ಹಲವು ರೀತಿಯ ಭವ್ಯವಾದ ಕೆತ್ತನೆಗಳನ್ನೂ ಕೆತ್ತಲಾಗಿದೆ. ಈ ಬೆಳ್ಳಿರಥದ ಎತ್ತರ 14 ಅಡಿಯಾಗಿದ್ದು, ಕೋಟೇಶ್ವರದ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜ ಗೋಪಾಲಾಚಾರ್ಯರು ಈ ರಥವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ.

ಕೋಟೇಶ್ವರದಲ್ಲಿ ಸಿದ್ಧಗೊಂಡ ಈ ಬೆಳ್ಳಿರಥವನ್ನು ಕೋಟೇಶ್ವರದಿಂದ ಸುಳ್ಯಕ್ಕೆ ಭವ್ಯ ಮೆರವಣಿಗೆಯ ಮೂಲಕ ರಥವನ್ನು ಕೊಂಡೊಯ್ಯಲಾಗಿದ್ದು, ಮೆರವಣಿಗೆಯಲ್ಲಿ ನೂರಾರು ವಾಹನಗಳು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಕುಂದಾಪುರದ ಕೋಟೇಶ್ವರದಿಂದ ಸುಳ್ಯಕ್ಕೆ ಬರುವ ಸಂದರ್ಭದಲ್ಲಿ ಕೋಟೇಶ್ವರದಿಂದ ಸುಳ್ಯದ ವರೆಗೆ ದಾರಿಯುದ್ಧಕ್ಕೂ ಹಲವು ಕಡೆಗಳಲ್ಲಿ ರಥಕ್ಕೆ ಭವ್ಯ ಸ್ವಾಗತವನ್ನು ಕೋರುವ ಕಾರ್ಯಕ್ರಮಗಳೂ ನಡೆದಿದೆ.

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅತ್ಯಂತ ಕಾರಣೀಕದ ಕ್ಷೇತ್ರವಾಗಿದ್ದು, ದೇಶ-ವಿದೇಶಗಳ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಈ ಕ್ಷೇತ್ರಕ್ಕಿದ್ದಾರೆ. ಹಲವಾರು ಗಣ್ಯ ಮಾನ್ಯರು ಈ ಕ್ಷೇತ್ರಕ್ಕೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದು, ಕೆವಿಜಿ ಸಂಸ್ಥೆ ನೀಡುವ ಈ ಬೆಳ್ಳಿರಥವೂ ಈ ಕೊಡುಗೆಗಳ ಸಾಲಿಗೆ ಸೇರಿಕೊಂಡಿದೆ.

Leave a Reply

Your email address will not be published. Required fields are marked *