ಬೈಂದೂರು: ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ರಚಿಸಿ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಹೆಸರಿನಲ್ಲಿ ವಂಚಿಸುತ್ತಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತರು ಅಕ್ರಮ ಲಾಭದ ಉದ್ದೇಶದಿಂದ ಅನಧಿಕೃತ ನಕಲಿ ವೆಬ್ಸೈಟ್ನ್ನು ರಚಿಸಿ, ಅವರಿಂದ ವಾಟ್ಸಾಪ್ ತಂತ್ರಾಂಶದಲ್ಲಿ ಪೋನ್ ಪೇಯ ಕ್ಯೂಆರ್ ಕೋಡ್ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಭಕ್ತರಿಂದ ಹಣವನ್ನು ವಂಚಿಸಿ ನಕಲಿ ವೆಬ್ಸೈಟ್ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



